ಮಂಗಳೂರು: ಪ್ರಯಾಣಿಕರು ಬಿಟ್ಟು ಹೋದ ನಗದು, ಚಿನ್ನಾಭರಣವಿದ್ದ ಬ್ಯಾಗನ್ನು ಮರಳಿ ವಾರಸುದಾರರಿಗೆ ನೀಡುವ ಮೂಲಕ ರಿಕ್ಷಾ ಚಾಲಕನೋರ್ವ ಪ್ರಾಮಾಣಿಕತೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.ಶನಿವಾರ ಪುತ್ತೂರಿನ ಕುಟುಂಬವೊಂದು ಯೂನಿಟಿ ಆಸ್ಪತ್ರೆಯಲ್ಲಿ ದಾಖಲಾದ ಸಂಬಂಧಿಕರನ್ನು ನೋಡಲೆಂದು ಬಂದು ಬಳಿಕ ತಮ್ಮ ಅಣ್ಣನ ಮನೆ ಪಡೀಲ್ಗೆ ಹೋಗಲು ರಿಕ್ಷಾ ಹಿಡಿದಿತ್ತು. ಯೂನಿಟಿಯಿಂದ ಪಡೀಲ್ ತನಕ ರಿಕ್ಷಾದಲ್ಲಿ ಹೋಗಿದ್ದು, ರಿಕ್ಷಾದಿಂದ ಇಳಿಯುವಾಗ ಬ್ಯಾಗನ್ನು ಮರೆತು ರಿಕ್ಷಾದಲ್ಲೆ ಬಿಟ್ಟು ಹೋಗಿದ್ದರು. ಅದರಲ್ಲಿ 5,000 ರೂ. ನಗದು, 4 ಚಿನ್ನದ ಉಂಗುರ, 1 ವಾಚ್, ಮೊಬೈಲ್ ಸೇರಿದಂತೆ ಒಟ್ಟು 35,000 ರೂ. ಮೌಲ್ಯದ ಸೊತ್ತುಗಳಿದ್ದವು.ಮನೆಗೆ ಹೋದ ಬಳಿಕ ಮನೆಯವರಿಗೆ ಬ್ಯಾಗ್ ನೆನಪಾಗಿ ಕೂಡಲೇ ರಿಕ್ಷಾದವರ ಬಳಿ ಬಂದು ಕೇಳಿದ್ದರು.
ಮಾತ್ರವಲ್ಲದೆ ಕಂಕನಾಡಿ ನಗರ ಠಾಣೆಗೂ ದೂರು ನೀಡಲು ಹೋಗಿದ್ದರು. ಅಷ್ಟರಲ್ಲಿ ರಿಕ್ಷಾ ಚಾಲಕ ರಾಜೇಶ್ ತನ್ನ ರಿಕ್ಷಾದಲ್ಲಿ ಬ್ಯಾಗ್ ಇರುವುದನ್ನು ಕಂಡು, ಅದರೊಳಗಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದರಿಂದ ಬ್ಯಾಗ್ನ ವಾರಸುದಾರರು ನಿಟ್ಟುಸಿರು ಬಿಟ್ಟರು. ಕೂಡಲೇ ಕಂಕನಾಡಿ ನಗರ ಠಾಣಾ ಪೊಲೀಸರು ರಿಕ್ಷಾ ಚಾಲಕನನ್ನು ಬರ ಹೇಳಿ ವಾರಸುದಾರರಿಗೆ ಬ್ಯಾಗ್ ಹಸ್ತಾಂತರಿಸಿ, ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.