ಮಂಗಳೂರು: ದಕ್ಷಿಣ ಕನ್ನಡ ಸಂಸದ "ನಳಿನ್ ಕುಮಾರ್ ಕಟೀಲ್ ಅವರಿಗೆ ಸ್ವಲ್ಪವೂ ಬುದ್ಧಿಯಿಲ್ಲ, ಸಂಸ್ಕಾರವಿಲ್ಲ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಮಧ್ವರಾಜ್ ತೇಜೋವಧೆ ಮಾಡೋಕೆ ಬಿಜೆಪಿಯವರು ಹೀಗೆ ಹೇಳುತ್ತಿದ್ದಾರೆ. ಇಮೇಜ್ ಹಾಳು ಮಾಡೋಕೆ ಇಂಥಹದ್ದನ್ನು ಹುಟ್ಟುಹಾಕುತ್ತಿದ್ದಾರೆ. ಪ್ರಮೋದ್ ಈ ಬಗ್ಗೆ ನೂರು ಬಾರಿ ಸ್ಪಷ್ಟೀಕರಣ ನೀಡಿದ್ದಾರೆ," ಎಂದು ವಿವರಣೆ ನೀಡಿದರು.
ಈ ಸಂದರ್ಭ ಪಕ್ಕದಲ್ಲೇ ಇದ್ದ ಪ್ರಮೋದ್ ಮಧ್ವರಾಜ್ ರನ್ನು ಕರೆದ ಸಿಎಂ, ತಾವು ಬಿಜೆಪಿಗೆ ಹೋಗ್ತೀರಾ ಎಂದು ಪ್ರಶ್ನಿಸಿದರು. ಸಿಎಂ ಜತೆ ಧ್ವನಿ ಗೂಡಿಸಿದ ಮಧ್ವರಾಜ್ ಇದೆಲ್ಲಾ ಬಿಜೆಪಿಯ ಸೃಷ್ಟಿಸುತ್ತಿರುವ ಸುಳ್ಳು, ಗೊಂದಲ ಎಂದು ಹೇಳಿದರು."ಸಂಸದ ನಳಿನ್ ಕುಮಾರ್ ಕಟೀಲ್ ಏನು ಮಾತಾಡುತ್ತಾರೆ ಅಂತ ಅವರಿಗೇ ಗೊತ್ತಿಲ್ಲ. ಅವರಿಗೆ ಸ್ವಲ್ಪವೂ ಬುದ್ಧಿಯಿಲ್ಲ; ಸಂಸ್ಕಾರವಿಲ್ಲ," ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.