ಮಂಗಳೂರು: ಹೋಟೆಲ್ ಕಾರ್ಮಿಕನ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಹೋಟೆಲ್ ಮಾಲೀಕನನ್ನು ಬಂಧಿಸಿದ ಘಟನೆ ದ.ಕ.ಜಿಲ್ಲೆಯ ಉಪ್ಪಿನಂಗಡಿಯ ಲಾವತ್ತಡ್ಕದಲ್ಲಿ ನಡೆದಿದೆ. ಕಾರ್ಮಿಕನಿಗೆ ಕಟ್ಟಿಗೆಯಿಂದ ಹೊಡೆದು ಗಂಭೀರ ಹಲ್ಲೆ ನಡೆಸಿ, ಬಳಿಕ ಆಸ್ಪತ್ರೆಗೆ ದಾಖಲಿಸಲ್ಪಟ್ಟು ಚಿಕಿತ್ಸೆ ಫಲಿಸದೆ ಮೃತಪಟ್ಟ ಕಾರಣ ಆರೋಪಿ ಹೋಟೆಲ್ ಮಾಲೀಕ ಲಾವತ್ತಡ್ಕದ ನಿವಾಸಿ ಕೆ.ವಿ. ಜಾರ್ಜ್ ನನ್ನು ಉಪ್ಪಿನಂಗಡಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮೃತರನ್ನು ಇಚ್ಲಂಪಾಡಿಯ ಗ್ರಾಮದ ಬಾಕಿಜಾಲು ನಿವಾಸಿ ಶ್ರೀನಿವಾಸ್ (45) ಎಂದು ಗುರುತಿಸಲಾಗಿದೆ. ನ. ೨೫ ರಂದು ಹೋಟೆಲ್ ನಲ್ಲಿ ಜಾರಿ ಬಿದ್ದರೆಂಬ ಕಾರಣ ನೀಡಿ ಶ್ರೀನಿವಾಸ್ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚಿಕಿತೆ ಫಲಿಸದೆ ಶ್ರೀನಿವಾಸ್ ಮೃತಪಟ್ಟಿದ್ದರು. ಆದರೆ ಪೊಲೀಸರ ಮುಂದೆ ಹೋಟೆಲ್ ಮಾಲೀಕ ಬೇರೇಯೆ ಕಾರಣ ನೀಡಿದ್ದ.
ಅಲ್ಲದೇ,ಪೊಲೀಸರ ಮುಂದೆ ಹೇಳಿಕೆಗಳನ್ನು ಬದಲಾಯಿಸುತ್ತಿದ್ದದ್ದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಆರೋಪಿಯನ್ನು ಪ್ರಭಾರ ಗ್ರಾಮಾಂತರ ಪೊಲೀಸ್ ಇನ್ ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ಎಸ್.ಐ. ನಂದಕುಮಾರ್ ನೇತೃತ್ವದ ಪೊಲೀಸ್ ತಂಡ ನ. 27ರಂದು ನಸುಕಿನಲ್ಲಿ ಅವರ ಮನೆಯಲ್ಲಿ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಗಿರಾಕಿಯೋರ್ವರ ಜೊತೆ ಜಗಳ ಆಡಿದ್ದ ಎಂಬ ಕಾರಣಕ್ಕಾಗಿ ಹಲ್ಲೆ ಮಾಡಿರುವುದಾಗಿ ಜೆ.ವಿ ಜಾರ್ಜ್ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.