ಮಂಗಳೂರು: ಮಂಗಳೂರು ಹೊರವಲಯದ ಕಾಟಿಪಳ್ಳದ ಸಫ್ವಾನ್ ಅಪಹರಣ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೂಡಬಿದಿರೆಯ ಬಳಿಯ ಕಡಂದಲೆ ಪೂಪಾಡಿಕಲ್ಲು ನಿವಾಸಿ ಮಹಮ್ಮದ್ ಫೈಝಲ್ ಇಬ್ರಾಹಿಂ ಶೇಖ್, ಸುರತ್ಕಲ್ ಕೃಷ್ಣಾಪುರದ ಸಾಹಿಲ್ ಇಸ್ಮಾಹಿಲ್ ಬಂಧಿತರು. ಆರೋಪಿಗಳನ್ನು ಮುಂಬಯಿಯ ಬಾಂದ್ರಾ ವೆಸ್ಟ್ ನ ಎಸ್. ವಿ. ರೋಡ್ ನಲ್ಲಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಾದ ಸುರತ್ಕಲ್ ನ ಸಫ್ವಾನ್ ಹುಸೈನ್, ಮುಕ್ಕ ನಿವಾಸಿ ಸಂಶುದ್ದೀನ್ ಮತ್ತು ಬಳ್ಳಾರಿಯ ಸೂಫಿ ಯಾನ್ ಬಂಧನಕ್ಕೆ ಬಾಕಿಯಿದ್ದು, ಅವರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.
ಅಕ್ಟೋಬರ್ 5ರಂದು ಕಾರಿನಲ್ಲಿ ಬಂದ ಆರೋಪಿಗಳು ಸಫ್ವಾನ್ ನನ್ನು ಅಪಹರಿಸಿದ್ದರು. ಬಳಿಕ ಅದೇ ದಿನ ಕಾರ್ಕಳ ಪರಿಸರದಲ್ಲಿ ಕೊಲೆಗೈದು ಮೃತದೇಹವನ್ನು ಆಗುಂಬೆ ಘಾಟಿಯಲ್ಲಿ ಎಸೆದಿದ್ದರು ಎಂದು ಈಗಾಗಲೇ ಬಂಧಿತರಾಗಿರುವ ಇಬ್ಬರು ಆರೋಪಿಗಳು ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ.ಬಂಧಿತರ ಹೇಳಿಕೆ ಪ್ರಕಾರ ಪೊಲೀಸರು ಕಳೇಬರದ ಶೋಧಕಾರ್ಯ ನಡೆಸಲು ಮುಂದಾಗಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.