(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ನ.29: ದಹಿಸರ್ ಶ್ರೀ ಕಾಶಿ ಮಠ ಮತ್ತು ಶ್ರೀ ವಿಠಲ ರಖುಮಾಯಿ ಮಂದಿರದ 5ನೇ ಬ್ರಹ್ಮ ರಥೋತ್ಸವವು ನವೆಂಬರ್ 21 ರಿಂದ ನವೆಂಬರ್ 26 ರ ತನಕ ವಿಜೃಂಭಣೆಯಿಂದ ನೇರವೇರಿತು.
ಆರು ದಿನಗಳ ಬೃಹತ್ ಉತ್ಸವ ಕಾರ್ಯಕ್ರಮವು ಧ್ವಜರೋಹಣದೊಂದಿಗೆ ಶುಭಾರಂಭಗೊಂಡಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಎಲ್ಲ ತರದ ಹೋಮ ಯಜ್ಞಗಳನ್ನು ಹಾಗೂ ಇತರ ಪೂಜಾಧಿ ಕಾರ್ಯಕ್ರಮಗಳನ್ನು ಶಾಶ್ತೋಕ್ತವಾಗಿ ನುರಿತ ವೈದಿಕರಿಂದ ನಡೆಸಲಾಯಿತು. ಐದನೇ ದಿನದಂದು ಅಭಿಷೇಕಗಳೊಂದಿಗೆ ಬ್ರಹ್ಮರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೇರವೇರಿತು. ಸುಮಾರು ಐದು ಸಾವಿರ ಭಕ್ತರು ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಗಂಧ ಪ್ರಸಾದ, ಭೋಜನ ಪ್ರಸಾದ ಸ್ವೀಕರಿಸಿ ಶ್ರಿ ವಿಠಲ ರಖುಮಾಯಿಯ ಅನುಗ್ರಹಕ್ಕೆ ಪಾತ್ರರಾದರು. ಈ ಆರು ದಿನಗಳಲ್ಲಿ ಶ್ರೀ ವಿಠಲ ರಖುಮಾಯಿಯ ಉತ್ಸವ ಮೂರ್ತಿಗಳನ್ನು ಸಿಂಗರಿಸಿ ಪಾಲಕಿಯಲ್ಲಿಟ್ಟು ಮೆರವಣಿಯೊಂದಿಗೆ ಮೂರ್ತಿಗಳನ್ನು ವಸಂತ ಮಂಟಪದಲ್ಲಿ ಶೇಷವಾಹನ ದಲ್ಲಿರಿಸಿ ವಸಂತ ಪೂಜೆಯನ್ನು ಅಷ್ಠಾವಧಾನಗಳಿಂದೊಡಗೂಡಿ ಸಂಭ್ರಮದಿಂದ ಆಚರಿಸಿದರು.
ಕಾಶೀ ಮಠದ ಮಠಾಧೀಶರಾದ ಪೂಜ್ಯ ಶ್ರೀಮದ್ ಸಮ್ಯಮೀಂದ್ರ ತೀರ್ಥಸ್ವಾಮಿ ಉಪಸ್ಥಿತರಿದ್ದು, ರಥಾರೂಢರಾದ ಶ್ರೀ ವಿಠಲ ರಖುಮಾಯಿಯ ಮೂರ್ತಿಗಳಿಗೆ ಆರತಿ ಬೆಳಗಿ ರಥರೋಹಣ ಮತ್ತು ರಥಯಾತ್ರೆಯಲ್ಲಿ ಪಾಲ್ಗೊಂಡು ವಿಶೇಷ ಅತಿಥಿsಗಳಿಗೆ ಪ್ರಸಾದ ನೀಡಿ ಆಶೀರ್ವಾದಿಸಿದರು.
ಕೊನೆಯ ದಿನ ರವಿವಾರ ಎನ್.ಎಲ್ ಕಾಂಪ್ಲೆಕ್ಸ್ನಲ್ಲಿನ ಜಿ.ಎಸ್.ಬಿ ಉದ್ಯಾನದಲ್ಲಿ ಅವಭೃತ ಸ್ನಾನ(ಓಕುಳಿ) ಆಚರಿಸಲಾಯಿತು.