ಕುಂದಾಪುರ: ವಿದ್ಯಾರ್ಥಿಗಳು ಪಾಠದೊಂದಿಗೆ ಪಾಠೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತೀ ಅಗತ್ಯ. ದೈಹಿಕ, ಮಾನಸಿಕ ಆರೋಗ್ಯ, ಉಲ್ಲಾಸಕ್ಕೆ ಕ್ರೀಡೆ ಸಹಕಾರಿಯಾಗುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಇದನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಬೇಕು ಎಂದು ಸಾಲಿಗ್ರಾಮದ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ವಾಸುದೇವ ಕಾರಂತ ಹೇಳಿದರು.
ಅವರು ಶುಕ್ರವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟದಲ್ಲಿ ಗೌರವ ವಂದನೆ ಸ್ವೀಕರಿಸಿ,ಕ್ರೀಡಾಧ್ವಜಾರೋಹಣಗೈದು ಮಾತನಾಡಿದರು.
ಶಾಲೆಯ ಸಂಚಾಲಕ ಅತೀ ವಂ.ದನೀಯ ಫಾ.ಅನಿಲ್ ಡಿ ಸೋಜಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ,ವಿದ್ಯಾರ್ಥಿಗಳು ಪಾಠಗಳ ಜತೆಗೆ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಇಲ್ಲಿ ಬಹುಮಾನ ಪಡೆಯುವುದರ ಮೂಲಕ ಮುಂದಿನ ದಿನಗಳಲ್ಲಿ ವಿದ್ಯಾಸಂಸ್ಥೆ,ಗುರು ಹಿರಿಯರ ಕೀರ್ತಿಯನ್ನು ಎತ್ತರಕ್ಕೆ ಏರಿಸುವಲ್ಲಿ ಶ್ರಮಿಸಬೇಕು ಎಂದರು. ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಲೂಯಿಸ್ ಫೆರ್ನಾಂಡಿಸ್ ಕ್ರೀಡಾಜ್ಯೋತಿಯನ್ನು ಬೆಳಗಿಸಿ ಶುಭ ಹಾರೈಸಿದರು.
ವಿದ್ಯಾರ್ಥಿ ನಾಯಕಿ ಕು.ಸ್ಮಿತಾ ಅತಿಥಿಗಳಿಗೆ ಗೌರವರಕ್ಷೆ ನೀಡಿದರು.ಸಹಾಯಕ ಕ್ರೀಡಾ ಸಚಿವ ಮಹಮ್ಮದ್ ಸರ್ಫ್ರಾಜ್ ಪ್ರತಿಜ್ಞಾವಿಧಿ ಬೋಧಿಸಿದರು.ವಿದ್ಯಾರ್ಥಿಗಳಾದ ಜೋಯಸ್ಟನ್,ಶಾಶಂಕ್ ಕೆ.ಸಿ.,ಪವನ ಕುಮಾರ,ತಿಲಕ್,ಸಹನಾ ಕ್ರೀಡಾಜ್ಯೋತಿ ಹೊತ್ತುತಂದರು.
ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಚೇತನಾ ಸ್ವಾಗತಿಸಿದರು.ಶಿಕ್ಷಕರಾದ ಸ್ಟ್ಯಾನ್ಲಿ ದಿನಮಣಿ, ಸ್ಮಿತಾ ಡಿ ಸೋಜಾ, ಸಂಗೀತಾ, ದೈಹಿಕ ಶಿಕ್ಷಣ ಶಿಕ್ಷಕರಾದ ರತ್ನಾಕರ ಶೆಟ್ಟಿ, ಶಾಂತಿ ಬರಟ್ಟೋ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕ್ರೀಡಾಕೂಟ ಸಂಘಟಿಸಿದರು.ಶಿಕ್ಷಕ ಭಾಸ್ಕರ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿ ಅಸುಂತಾ ಲೋಬೋ ವಂದಿಸಿದರು.