ಮಂಗಳೂರು: ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಶಿರಾಡಿ ರಕ್ಷಿತಾರಣ್ಯದಲ್ಲಿ ಬೆಲೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.ರಾತ್ರಿ ಹೊತ್ತಿನಲ್ಲಿ ಮರ ಕಡಿದು ವ್ಯವಸ್ಥಿತವಾಗಿ ಹೊರಗೆ ಸಾಗಿಸುವ ಜಾಲ ವ್ಯಾಪಕವಾಗಿದ್ದು, ಇದರ ಬಗ್ಗೆ ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮರ ಕಳ್ಳ ಸಾಗಣೆ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಅರಣ್ಯ ಮಧ್ಯೆ ಬೃಹತ್ ಸಾಗುವಾನಿ, ಹೆಬ್ಬಲಸು, ತೇಗದ ಮರಗಳನ್ನು ಕಡಿದು ಸಣ್ಣ ದಿಮ್ಮಿಗಳಾಗಿಸಿ ಸಾಗಾಟಕ್ಕೆ ರೆಡಿ ಮಾಡಿಟ್ಟ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.
ಅರಣ್ಯ ಸಚಿವ ರಮಾನಾಥ ರೈ ಅವರ ತವರು ಜಿಲ್ಲೆಯಲ್ಲಿಯೇ ಮರ ಕಳ್ಳರಿಗೆ ಇಲಾಖೆಯ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆಯೇ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಅರಣ್ಯ ಸಚಿವರು ಕ್ರಮ ಕೈಗೊಳ್ಳಬೇಕಿದೆ.