ಮಂಗಳೂರು : ಓಖಿ ಚಂಡಮಾರುತದ ಪ್ರಭಾವ ರಾಜ್ಯದ ಕರಾವಳಿ ತೀರಕ್ಕೂ ತಟ್ಟಿದೆ. ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲಿ ಅಬ್ಬರ ಜೋರಾಗಿದೆ. ಮಂಗಳೂರು ಹೊರವಲಯದ ಉಳ್ಳಾಲದ ತೀರ ಪ್ರದೇಶದಲ್ಲಿ ಕಡಲ ಅಬ್ಬರ ಹೆಚ್ಚಿದ್ದು ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿದೆ. ಕಳೆದ ರಾತ್ರಿ ಉಳ್ಳಾಲದ ರೆಸಾರ್ಟ್ ಗೂ ನೀರು ನುಗ್ಗಿದೆ.ಜಿಲ್ಲೆಯ ಮಂಜೇಶ್ವರದ ಕಡಪ್ಪರ, ಉಪ್ಪಳ ಬಳಿಯ ಕೊಯಿಪಾಡಿ ಎಂಬಲ್ಲಿ 6 ಮನೆಗಳು ಸಮುದ್ರದ ಪಾಲಾಗಿವೆ. ಅಲ್ಲಿದ್ದ ನಿವಾಸಿಗಳನ್ನು ಮೊದಲೇ ಸ್ಥಳಾಂತರ ಮಾಡಿದ್ದರಿಂದ ಜೀವ ಹಾನಿ ತಪ್ಪಿದೆ.
ಮಂಜೇಶ್ವರದ ಕಡಲ ಕಿನಾರೆಯಲ್ಲಿ ಮನೆಯೊಂದು ನೋಡ ನೋಡುತ್ತಿದ್ದಂತೆಯೇ ಸಮುದ್ರದ ಪಾಲಾಯಿತು. ಶನಿವಾರ ಸಂಜೆಯಿಂದಲೇ ಕಡಲ್ಕೊರೆತ ಆರಂಭವಾಗಿದೆ. ಇದರಿಂದಾಗಿ ಮನೆಗಳಿಗೆ ಹಾನಿಯಾಗಿದೆ.ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. 'ಓಖಿ' ಚಂಡಮಾರುತದ ಅಬ್ಬರದಿಂದಾಗಿ ತಮಿಳುನಾಡು, ಕೇರಳ, ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ..ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.