ಮಂಗಳೂರು : ಖಾಸಗಿ ಸಿಟಿ ಬಸ್- ಕಂಟೈನರ್ ಟ್ರಕ್ ನಡುವೆ ಗುರುವಾರ ಬೆಳಗ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು , 17 ಮಂದಿ ಗಾಯಗೊಂಡ ಘಟನೆ ಮಂಗಳೂರಿನ ನಂತೂರು ಜಂಕ್ಷನ್ ಬಳಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಗುರುಪುರ ಕೈಕಂಬದ ಕವಿತಾ (50) ಎಂದು ಗುರುತಿಸಲಾಗಿದೆ.
ವೆನ್ ಲಾಕ್ ಸರಕಾರಿ ಆಸ್ಪತ್ರೆ ಯಲ್ಲಿ ಕೆಲಸ ಮಾಡುತ್ತಿದ್ದ ಕವಿತಾ , ಬಸ್ ನ ಮುಂಭಾಗ ಕುಳಿತಿದ್ದರು. ಡಿಕ್ಕಿಯ ರಭಸಕ್ಕೆ ಮಹಿಳೆ ತೀವ್ರ ಗಾಯಗೊಂಡಿದ್ದರು.ಗಂಭೀರ ಗಾಯಗೊಂಡ ಕವಿತಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.ಘಟನೆಯಲ್ಲಿ 17 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಬಸ್ ನಗರದ ಬಿಕರ್ನಕಟ್ಟೆಯಿಂದ ಸ್ಟೇಟ್ ಬ್ಯಾಂಕ್ ನತ್ತ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.ಡಿಕ್ಕಿ ಉಂಟಾಗಿರುವ ರಭಸಕ್ಕೆ ಎರಡೂ ವಾಹನಗಳು ಸಂಪೂರ್ಣ ಜಖಂ ಆಗಿವೆ. ಘಟನೆಗೆ ಸಂಬಂಧಿಸಿದಂತೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ