ಮಂಗಳೂರು: ಓಖಿ ಚಂಡಮಾರುತ ಹೊಡೆತಕ್ಕೆ ಸಿಲುಕಿ ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 13 ಮಂದಿ ಮೀನುಗಾರರನ್ನು ಕೊನೆಗೂ ಭಾರತಿಯ ತಟರಕ್ಷಣಾ ಪಡೆ ರಕ್ಷಿಸಿ ದಡಕ್ಕೆ ಕರೆತಂದಿದೆ.ಕೇರಳ ಮತ್ತು ಮಂಗಳೂರು ಕೋಸ್ಟ್ ಗಾರ್ಡ್ ಅಧಿಕಾರಿಗಳು 'ಅಮಾರ್ಥ್ಯ' ಹೆಸರಿನ ಸ್ಪೀಡ್ ಬೋಟ್ ಮೂಲಕ 2 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿದ್ದ 13 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.ನವೆಂಬರ್ 7 ರಂದು ಬಾರಕುಡ ಹೆಸರಿನ ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ಕೇರಳದ ಕೊಚ್ಚಿಯಿಂದ ತೆರಳಿತ್ತು. ಆದರೆ, ನವೆಂಬರ್ 28 ರಂದು ಓಖಿ ಚಂಡಮಾರುತ ಹೊಡೆತಕ್ಕೆ ಸಿಲುಕಿದ ಬಾರಕುಡ ಹೆಸರಿನ ಬೋಟ್ ಲಕ್ಷದ್ವೀಪ ಸಮೀಪ ಮುಳುಗುವ ಹಂತಕ್ಕೆ ತಲುಪಿತ್ತು.ಬೋಟ್ ನಲ್ಲಿದ್ದ ವೈರ್ ಲೆಸ್ ಕಡಿತಗೊಂಡಿದ್ದರಿಂದ್ದ ಸಹಾಯಕ್ಕೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಡಿಸೆಂಬರ್ 2 ರಂದು ಈ ಬೋಟ್ ಒಳಗಡೆ ನೀರು ನುಗ್ಗ ತೊಡಗಿತ್ತು.
ಆ ಸಂದರ್ಭದಲ್ಲಿ ಬೋಟ್ ನಲ್ಲಿದ್ದ ಸಿಬ್ಬಂದಿ ಪಾತ್ರೆಗಳನ್ನು ಬಳಸಿ ಬೋಟ್ ನಲ್ಲಿದ್ದ ನೀರು ಹೊರಹಾಕಿದ್ದರು.ಇದೇ ವೇಳೆ ಏಕಾಏಕಿ ವೈರ್ ಲೆಸ್ ಸಂಪರ್ಕ ಸಿಕ್ಕಿದಾಗ ಬೋಟ್ ನಲ್ಲಿದ್ದ ಸಿಬ್ಬಂದಿ ತಾವು ಅಪಾಯದಲ್ಲಿರೋ ಬಗ್ಗೆ ಕೇರಳದ ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಿದ್ದರು. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಕೇರಳ ಮತ್ತು ಮಂಗಳೂರು ಕೋಸ್ಟ್ ಗಾರ್ಡ್ ಅಧಿಕಾರಿಗಳು ಕೋಸ್ಟ್ ಗಾರ್ಡ್ ನ ಅಮಾರ್ಥ್ಯ ಹೆಸರಿನ ಸ್ಪೀಡ್ ಬೋಟ್ ಮೂಲಕ 2 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿದ್ದ 13 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.ರಕ್ಷಿಸಲ್ಪಟ್ಟ ಈ ಮೀನುಗಾರರೆಲ್ಲ ತಮಿಳುನಾಡು, ಕೇರಳ,ಅಸ್ಸಾಂ ಮೂಲದ ಮೀನುಗಾರರಾಗಿದ್ದಾರೆ. ಕಳೆದ 4 ದಿನಗಳ ಕಾಲ ತಮ್ಮೂಂದಿಗೆ ತಂದಿದ್ದ ಆಹಾರ ಖಾಲಿಯಾದ ಕಾರಣ ಹಸಿ ಮೀನು ತಿಂದು ನೀರು ಕುಡಿದು ಜೀವ ಉಳಿಸಿಕೊಂಡಿದ್ದರು. ಜೀವನ್ಮರಣ ಸ್ಥಿತಿಯಲ್ಲಿದ್ದ ಈ ಮೀನುಗಾರರನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳು ಬುಧವಾರ ಸಂಜೆ ಮಂಗಳೂರಿನ ಎನ್ ಎಂಪಿಟಿ ಬಂದರಿಗೆ ಕರೆತಂದಿದ್ದಾರೆ.