ಮಂಗಳೂರು: ತಂಡವೊಂದು ಮೂರು ಮಂದಿಗೆ ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ರಾವ್ ಆಂಡ್ ರಾವ್ ರಸ್ತೆ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಓರ್ವ ವ್ಯಕ್ತಿಯ ತಲೆಗೆ ಗಂಭೀರ ಗಾಯಗಳಾಗಿದ್ದು ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಬಂದರು ನಿವಾಸಿಗಳಾದ ಶಫೀಕ್, ಅನೀಸ್ , ಹಫೀಜ್ ಎಂದು ಗುರುತಿಸಲಾಗಿದೆ.ಸೋಮವಾರ ಬಂದರ್ ನ ಹರ್ಷ ಬಾರ್ ಬಳಿ ಶಫೀಕ್ ಅವರಿಗೆ ಮೂವರ ತಂಡ ಥಳಿಸುತ್ತಿತ್ತು.
ಈ ಸಂದರ್ಭ ಆ ದಾರಿಯಾಗಿ ಬರುತ್ತಿದ್ದ ಶಫೀಕ್ ಅವರ ಪರಿಚಯದ ಅನೀಸ್ ಪಾಂಡೇಶ್ವರ ಕಡೆ ತೆರಳುತ್ತಿದ್ದರು. ತಂಡವು ಹಲ್ಲೆ ನಡೆಸುವುದನ್ನು ತಡೆಯಲು ಹೋದಾಗ ಮೂವರು ದುಷ್ಕರ್ಮಿಗಳು ಅವರಿಗೂ ಹಲ್ಲೆ ಮಾಡಿದ್ದಾರೆ.ಇದಲ್ಲದೇ ಬಾರ್ ಅಂಗಡಿ ಸಮೀಪ ಇದ್ದ ಪಾನ್ ಅಂಗಡಿಯ ವ್ಯಾಪಾರಿಗೂ ಗಾಯವಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.