ಮಂಗಳೂರು: ಲಕ್ಷದ್ವೀಪಕ್ಕೆ ತೆರಳಲೆಂದು ಡಿ 18 ರ ಸೋಮವಾರ ರಾತ್ರಿ ಮಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಜವಾಹರ ಲಾಲ್ ನೆಹರೂ ಅನಂತರದಲ್ಲಿ ಮಂಗಳೂರು ನಗರದಲ್ಲಿ ವಾಸ್ತವ್ಯ ಹೂಡಿದ ಏಕೈಕ ಪ್ರಧಾನಿ ಎಂಬ ಹೆಗ್ಗಳಿಕೆ ಹಾಗೂ ಘಟನಾವಳಿಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾದರು.ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಅವರು ನಗರದ ಕದ್ರಿಹಿಲ್ಸ್ನಲ್ಲಿರುವ ಸರ್ಕ್ಯೂಟ್ ಹೌಸ್ಗೆ ಆಗಮಿಸುವ ವೇಳೆಗೆ ಮಧ್ಯರಾತ್ರಿ 12.30 ಕಳೆದಿತ್ತು.
ಆ ಬಳಿಕ ಎರಡೂವರೆಗೆ ಗಂಟೆಗಳ ಪ್ರಯಾಣವನ್ನು ಕೈಗೊಂಡ ಹಿನ್ನೆಲೆಯಲ್ಲಿ ಸರ್ಕೀಟ್ ಹೌಸ್ಗೆ ಆಗಮಿಸುವ ವೇಳೆಗೆ ಆಯಾಸಗೊಂಡಿದ್ದು, ನೇರವಾಗಿ ತಮ್ಮ ಕೊಠಡಿಗೆ ತೆರಳಿ, ವಿಶ್ರಾಂತಿ ಪಡೆದುಕೊಂಡರು. ಇಂದು ಮುಂಜಾನೆ 3 ಗಂಟೆಗೆ ಎದ್ದು ಯೋಗಭ್ಯಾಸ ಮಾಡಿ ಬಳಿಕ ನೀರುದೋಸೆ,ಮೂಡೆ, ಅವಲಕ್ಕಿ ಉಪ್ಪಿಟ್ಟು ಸವಿದರು. ಈ ನಡುವೆ ಮಧ್ಯರಾತ್ರಿಯಾಗಿದ್ದರೂ ಪ್ರಧಾನಿ ಅವರನ್ನು ನಗರಕ್ಕೆ ಬರ ಮಾಡಿಕೊಳ್ಳುವ ಮೂಲಕ ಭವ್ಯ ಸ್ವಾಗತ ಕೋರುವುದಕ್ಕೂ ವಿಮಾನ ನಿಲ್ದಾಣದ ವಾಹನಗಳ ಪಾರ್ಕಿಂಗ್ ಜಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದು ವಿಶೇಷ.
ಸೋಮವಾರ ರಾತ್ರಿ ಸುಮಾರು 8 ಗಂಟೆಯಿಂದಲೇ ಬಿಜೆಪಿ ಕಾರ್ಯಕರ್ತರು ವಿಮಾನ ನಿಲ್ದಾಣದ ಹೊರಭಾಗದಲ್ಲಿ ಮೋದಿ ಆಗಮನವನ್ನು ಎದುರು ನೋಡುತ್ತ ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಮಂಗಳವಾರ ಬೆಳಗ್ಗೆ ಸರ್ಕೀಟ್ ಹೌಸ್ನಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿ 7.30ರ ಸುಮಾರಿಗೆ ರಸ್ತೆ ಮಾರ್ಗವಾಗಿ ವಾಪಸ್ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ತೆರಳಿದ್ದಾರೆ.