ಮಂಗಳೂರು: ಕಳೆದ ಸಂಜೆ ಭವ್ಯ ಸ್ವಾಗತ ಕೋರಿದ ಮಂಗಳೂರಿನ ಜನರಿಗೆ ನನ್ನ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತಡರಾತ್ರಿ ಮಂಗಳೂರಿಗೆ ಬಂದಿಳಿದಾಗ ಬಿಜೆಪಿ ಕಾರ್ಯಕರ್ತರು, ಕರಾವಳಿಯ ಜನತೆಯಿಂದ ದೊರೆತ ಭವ್ಯ ಸ್ವಾಗತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ, ಅಭಿಮಾನಿಗಳ ಹಾಗೂ ತಾವು ಅಭಿಮಾನಿಗಳತ್ತ ಕೈ ಬೀಸುತ್ತಿರುವ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಅವರೊಂದಿಗೆ ಬಿಜೆಪಿ ಗೆಲುವಿನ ಸಂಭ್ರಮಾಚರಣೆಯನ್ನು ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿತ್ತು. ಏರ್ಪೋರ್ಟ್ನಿಂದ ನಿರ್ಗಮಿಸುವ ರಸ್ತೆಯನ್ನು ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜದಿಂದ ಸಿಂಗರಿಸಿದ್ದು, ರಸ್ತೆಯುದ್ದಕ್ಕೂ ಮುಖಂಡರು ಸ್ವಾಗತ ಕೋರುವ ದೊಡ್ಡ ದೊಡ್ಡ ಫ್ಲೆಕ್ಸ್ ಅಳವಡಿಸಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ಪರಿಸರ, ಕೆಪಿಟಿ ವೃತ್ತ, ಯೆಯ್ಯಾಡಿ, ಪದವಿನಂಗಡಿ, ಕಾವೂರು ಸೇರಿದಂತೆ ಪ್ರಧಾನಿ ಸಂಚರಿಸುವ ಪ್ರಮುಖ ಜಂಕ್ಷನ್ಗಳು ಕೇಸರಿಮಯಗೊಂಡಿದ್ದವು.