ಮುಂಬಯಿ, ಡಿ.20: ಇದೇ ಡಿಸೆಂಬರ್ 23 ಮತ್ತು 24ರಂದು ಮಂಗಳೂರು ಪಿಲಿಕುಳದಲ್ಲಿ ನಡೆಯಲಿರುವ ತುಳುನಾಡೋಚ್ಚಯ-2017 ಸಂಭ್ರÀ್ರಮದಲ್ಲಿ ಪ್ರದಾನಿಸಲಾಗುವ ಪ್ರತಿಷ್ಠಿತ `ತುಳುರತ್ನ' ಪ್ರಶಸ್ತಿಗೆ ಮುಂಬಯಿ ಅಲ್ಲಿನ ಹಿರಿಯ ಸಾಹಿತಿ ಅತ್ತಿಮಬ್ಭೆ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ ಡಾ| ಸುನೀತಾ ಎಂ. ಶೆಟ್ಟಿ ಭಾಜನರಾಗಿದ್ದಾರೆ.
ವಿಶ್ವ ತುಳುವೆರೆ ಆಯನೊ ಕೂಟ ಮತ್ತು ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತುಳುನಾಡಿನಲ್ಲಿ ಜಾತಿ-ಮತ, ಭಾಷಾ, ಸೌಹಾರ್ದತೆ ಎಂಬ ನೆಲೆಗಟ್ಟಿನಲ್ಲಿ ತುಳು ತುಳುನಾಡೋಚ್ಛಯ-2017 ಸಂಭ್ರಮ ಜರಗಲಿದೆ ಎಂದು ತುಳುನಾಡೋಚ್ಚಯ ಸಮಿತಿ ಅಧ್ಯಕ್ಷ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ತಿಳಿಸಿದ್ದಾರೆ. ಡಿ.24ರಂದು ಮಧ್ಯಾಹ್ನ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ| ಸುನೀತಾ ಶೆಟ್ಟಿ ಮತ್ತಿತರ ಗಣ್ಯರಿಗೆ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು ಎಂದು ತುಳುನಾಡೋಚ್ಚಯ ಪ್ರಧಾನ ಕಾರ್ಯದರ್ಶಿ ಶಮೀನ ಆಳ್ವ ಮೂಲ್ಕಿ ತಿಳಿಸಿದ್ದಾರೆ.
`ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಮೆಮೋರಿಯಲ್' ಪ್ರಶಸ್ತಿಗೂ ಸುನೀತಾ ಶೆಟ್ಟಿ ಆಯ್ಕೆ
ಮುಂಬಯಿನಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಚೆಂಬೂರು ಕರ್ನಾಟಕ ಸಂಘ ಇದರ ವಾರ್ಷಿಕ ಸಾಹಿತ್ಯ-ಸಂಸ್ಕೃತಿ, ಸಮ್ಮಾನ ಸಂಭ್ರಮ `ಸಾಹಿತ್ಯ ಸಹವಾಸ-2017-18' ಕಾರ್ಯಕ್ರಮವು ಇದೇ ಡಿ.23 ರಂದು ಆಯೋಜಿಸಿದ್ದು ಈ ಭವ್ಯ ಸಮಾರಂಭದಲ್ಲಿ ತುಳುವ ಕನ್ನಡಿಗರಿಗಾಗಿ ವಾರ್ಷಿಕವಗಿ ನೀಡುವ ಮೇರು ಪುರಸ್ಕಾರ `ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಮೆಮೋರಿಯಲ್' ಪ್ರಶಸ್ತಿಯನ್ನು ಪ್ರಸಿದ್ಧಿ ಲೇಖಕಿ, ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಅವರಿಗೆ ಪ್ರದಾನಿಸಲಾಗುವುದು ಎಂದು ಸಂಘವು ಪ್ರಕಟನೆಯಲ್ಲಿ ತಿಳಿಸಿದೆ.
ಡಾ| ಸುನೀತಾ ಮಹಾಬಲ ಶೆಟ್ಟಿ
ಡಾ| ಸುನೀತಾ ಶೆಟ್ಟಿ ಅವರು ಶಿವರಾಮ ಕಾರಂತ ಕಾದಂಬರಿಗಳಲ್ಲಿ ಸ್ತ್ರೀ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಿಂದ ಪಿಎಚ್ಡಿ ಪದವಿ ಪಡೆದಿರುವರು. ನಾಗ ಸಂಪಿಗೆ, ಪಿಂಗಾರ, ಸಂಕ್ರಾಂತಿ, ಕರಜನ, ಪದಪಣ್ ಕಣ್ಣಾರೋ ಮೊದಲಾದ ಕವನ ಸಂಕಲನ ಪ್ರಕಟಿಸಿದ್ದಾರೆ. ಹಲವು ಪ್ರವಾಸ ಕೃತಿಗಳನ್ನೂ ಹೊರ ತಂದಿರುವರು. ಇವರ ಕವನಗಳ ಧ್ವನಿ ಬಹಳ ಜನಪ್ರಿಯವಾಗಿವೆ.