ಮಂಗಳೂರು: ಜನವರಿ-ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದೊಳಗೆ ಮಂಗಳೂರು ಹೊರವಲಯದ ಪಿಲಿಕುಳದಲ್ಲಿ ನಿರ್ಮಾಣವಾಗುತ್ತಿರುವ 3D ಪ್ಲಾನಿಟೋರಿಯಮ್ ಸಾರ್ವಜನಿಕರ ವೀಕ್ಷಣೆಗಾಗಿ ಲಭ್ಯವಾಗಲಿದೆ. ಪ್ಲಾನಿಟೋರಿಯಮ್ ನ್ನು ಸುಮಾರು 35.60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸ್ವಾಮಿ ವಿವೇಕಾನಂದ ಅವರ ಹೆಸರನ್ನು ಇಡಲಾಗಿದೆ.
ಇದು ಭಾರತದ ಮೊದಲ ಯೋಜನೆಯಾಗಿದ್ದು ಹಾಗೂ ಜಗತ್ತಿನಲ್ಲೇ 21 ನೇ ತಾರಾಲಯವಾಗಲಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತರಾಂ ಹೇಳಿದರು. ಅವರು ಪಿಲಿಕುಳದಲ್ಲಿ ನಿರ್ಮಾಣ ಹಂತದಲ್ಲಿರುವ 3D ಪ್ಲಾನೆಟೇರಿಯಮ್ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. 18 ಮೀ ವ್ಯಾಸದ ಮತ್ತು 15 ಡಿಗ್ರಿ ಕೋನದ ಸ್ವಾಮಿ ವಿವೇಕಾನಂದ 3D ತಾರಾಲಯದಲ್ಲಿ, ನ್ಯಾನೋ ಸೀಮ್ ವ್ಯವಸ್ಥೆಯ ಗುಮ್ಮಟ ಹಾಗೂ ಆಪ್ಟೊ ಮೆಕ್ಯಾನಿಕ್ ಮತ್ತು 8K ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಮ್ ಗಳಿದೆ.
ಈ ಹೈಬ್ರೀಡ್ ತಾರಾಲಯವು ದೇಶದ ಪ್ರಥಮ 3D ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು, ಅಡ್ವಾನ್ಸ್ ಟೆಕ್ನಾಲಾಜಿಯುಳ್ಳ ಈ ತಾರಾಲಯ ಮಕ್ಕಳಿಗೆ ದೊಡ್ಡ ಕೊಡುಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.