ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠಧೀಶರು
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಜ.21: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಇದರ ಮಠಾಧೀಶ, ಪರ್ತಗಾಳಿ ಜಿವೋತ್ತಮ ಮಠದ 23ನೇ ಯತಿವರ್ಯ ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಅವರು ತಮ್ಮ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರನ್ನೊಳಗೊಂಡು ಇಂದಿಲ್ಲಿ ಭಾನುವಾರ ಸಂಜೆ ಮಹಾರಾಷ್ಟ್ರದ ಅಯೋಧ್ಯನಗರಿ ಹೆಸರಾಂತ ಮುಂಬಯಿ ವಡಲಾ ಅಲ್ಲಿನ ಶ್ರೀ ರಾಮಮಂದಿರ ದ್ವಾರಕಾನಾಥ ಭವನಕ್ಕೆ ಚರಣಸ್ಪರ್ಶಗೈದರು.
ಪಟ್ಟಶಿಷ್ಯ ಸನ್ಯಾಸ ದೀಕ್ಷೆ ಪಡೆದ ಬಳಿಕ ವಿದ್ಯಾಧಿರಾಜತೀರ್ಥ ಶ್ರೀಪಾದರೊಂದಿಗೆ ಇದೇ ಮೊದಲ ಬಾರಿ ಮಹಾನಗರಕ್ಕೆ ಪುರಪ್ರವೇಶಗೈದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಶ್ರೀಗಳಿಗೆ ದಾದರ್ ಪೂರ್ವದ ಪಾರ್ಸಿ ಕಾಲೋನಿಯಿಂದ ಭವ್ಯ ಮೆರವಣಿಗೆಯಲ್ಲಿ ಚೆಂಡೆವಾದ್ಯಗಳ ನೀನಾದ, ಕುಂಭಸ್ವಾಗತದೊಂದಿಗೆ ರಾಮ ಸೇವಕರು, ಮಹಿಳಾವೃಂದ ಹಾಗೂ ಭಕ್ತಾಭಿಮಾನಿಗಳು ಸುಖಾಗಮನ ಕೋರಿದರು.
ಯತಿವರ್ಯರು ಶ್ರೀ ರಾಮಮಂದಿರಕ್ಕೆ ಚರಣಸ್ಪರ್ಶಗೈದು ಶ್ರೀ ರಾಮಚಂದ್ರ ದೇವರ ಮತ್ತು ಪ್ರತಿಷ್ಠಾಪಿತ ಮಹಾಗಣಪತಿ ದರ್ಶನ ಪಡೆದÀು ಪೂಜೆ ನೆರವೇರಿಸಿದರು.
ಇಂದಿನಿಂದ (ಜ.21) ಫೆ.11ರ ತನಕ ಸುಮಾರು ಮೂರುವಾರಗಳ ಕಾಲ ಗುರುಶಿಷ್ಯರು ಮುಂಬಯಿಯಲ್ಲಿ ಮೊಕ್ಕಾಂ ಹೂಡಿ ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿ ಭಕ್ತಾದಿಗಳಿಗೆ ಏಕಕಾಲಕ್ಕೆ ದ್ವಿಯತಿವರ್ಯರ (ಗುರುಶಿಷ್ಯರ) ದರ್ಶನ ಲಭಿಸಲಿದ್ದು ಶ್ರೀಪಾದರು ಭಕ್ತಾಭಿಮಾನಿಗಳಿಗೆ ಮಂತ್ರಾಕ್ಷತೆ, ಪ್ರಸಾದವನ್ನಿತ್ತು ಹರಸಲಿದ್ದಾರೆ ಎಂದು ಮಠದ ವಕ್ತಾರರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ವಡಾಲಾ ಮುಂಬಯಿ ಸಮಿತಿ ಕಾರ್ಯಾಧ್ಯಕ್ಷ ಗೋವಿಂದ ಎಸ್.ಭಟ್ ಹಾಗೂ ಜಿಎಸ್ಬಿ ಗಣೇಶೋತ್ಸವ ಉತ್ಸವ ಸಮಿತಿ ಅಧ್ಯಕ್ಷ ಉಲ್ಲಾಸ್ ಡಿ.ಕಾಮತ್, ಕಾರ್ಯಾಧ್ಯಕ್ಷ ಎನ್.ಎನ್ ಪಾಲ್, ಮುಕುಲ್ ಕಾಮತ್, ಅಮುಲ್ ಪೈ, ಉಮೇಶ್ ಪೈ ಸೇರಿದಂತೆ ನೂರಾರು ರಾಮ ಸೇವಾಕರ್ತರು, ಭಕ್ತರು ಉಪಸ್ಥಿತರಿದ್ದರು.