ಕುಂದಾಪುರ, ಜ.24: ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕುಂದಾಪುರ ವಲಯ ಕಥೊಲಿಕ್ ಸಭಾ ಇವರು ಆಯೋಜಿಸಲ್ಪಟ್ಟ ಅಲ್ಪ ಸಂಖ್ಯಾಕರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ದ, ಸಿಖ್ ಮತ್ತು ಪಾರ್ಸಿ ಸಮುದಾಯದವರಿಗೆ ಸರಕಾರದಿಂದ ಸಿಗುವ ವಿವಿಧ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮವು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾ ಭವನದಲ್ಲಿ ಜರಗಿತು. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಅಜಯ್ ಡಿಸೋಜಾ ಮತ್ತು ಅಲ್ಪ ಸಂಖ್ಯಾಕ ನಿಗಮದ ಅಧಿಕಾರಿ ಮಮ್ತಾಜ್ ಅಲ್ಪ ಸಂಖ್ಯಾಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ವಿವಿಧ ಯೋಜನೆಗಳನ್ನು ಸಭೆಯಲ್ಲಿ ತಿಳಿಸಿ ಅದನ್ನು ಹೇಗೆ ಪಡೆದುಕೊಳ್ಳಬಹುದೆನ್ನುವ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಸಂಘಟನೇಯ ಅಧ್ಯಾತ್ಮಿಕ ನಿರ್ದೇಶರಾದ ವಂ|ಫಾ|ಅನಿಲ್ ಡಿಸೋಜಾ ವಹಿಸಿ ‘ಅಲ್ಪ ಸಂಖ್ಯಾಕರಿಗೆ ನೀಡುವ ಸೌಲಭ್ಯಗಳು ಹಾಗೂ ಯೋಜನೆಗಳನ್ನು, ಸಮರ್ಪಕವಾಗಿ ಬಳಸಿಕೊಂಡು, ಆರ್ಥಿಕ ಸ್ಥಿತಿ ಉತ್ತಮ ಮಟ್ಟಕ್ಕೆ ಕೊಂಡಯ್ದು, ಸಮಾಜದಲ್ಲಿ ಸಮಾನತೆಯನ್ನು ಪಡೆದುಕೊಳ್ಳ ಬೇಕೆಂದು’ ಸಂದೇಶ ನೀಡಿದರು. ಕುಂದಾಪುರ ವಲಯ ಕಥೊಲಿಕ್ ಸಭಾದ ನಿಯೋಜಿತ ಅಧ್ಯಕ್ಷ ಮೈಕಲ್ ಪಿಂಟೊ ಸ್ವಾಗತಿಸಿದರು, ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾಕರದ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ಪುರಸಭಾ ಮಾಜಿ ಅಧ್ಯಕ್ಷ ಹಾರುನ್ ಸಾಹೇಬ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ವಿನೋದ್ ಕ್ರಾಸ್ಟಾ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು, ವಲಯ ರಾಜಕೀಯ ಸಂಚಾಲಕಿ ಶಾಂತಿ ಪಿರೇರಾ ವಂದಿಸಿದರು.