ಧರ್ಮಸ್ಥಳದಲ್ಲಿ ಧರ್ಮ ಸದಾ ಜಾಗೃತವಾಗಿದೆ.
ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಧರ್ಮವು ಸದಾ ಜಾಗೃತವಾಗಿದೆ. ಸತ್ಯ, ಧರ್ಮ, ನ್ಯಾಯ, ನೀತಿ ಇಲ್ಲಿ ನಿತ್ಯವೂ ಅನುಷ್ಠಾನದಲ್ಲಿದ್ದು, ಇಲ್ಲಿಗೆ ಬಂದಾಗ ತಮಗೆ ಅತೀವ ಆನಂದವಾಗಿದೆ ಎಂದು ಉಪಾಧ್ಯಾಯ ಶ್ರೀ 108 ಮಯಾಂಕ ಸಾಗರ ಮುನಿ ಮಹಾರಾಜರು ಹೇಳಿದರು.
ಧರ್ಮಸ್ಥಳಕ್ಕೆ ಮುನಿ ಸಂಘದವರು ಶುಕ್ರವಾರ ಸಂಜೆ ಪುರಪ್ರವೇಶ ಮಾಡಿದಾಗ ಅವರಿಗೆ ಭಕ್ತಿಪೂರ್ವಕ ಸ್ವಾಗತ ಕೋರಲಾಯಿತು.
ಮೆರವಣಿಗೆಯಲ್ಲಿ ಬಸದಿಗೆ ಕರೆದುಕೊಂಡು ಹೋದ ಬಳಿಕ ಅಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ದರ್ಶನ ಪಡೆದು ಅವರು ಮಂಗಲ ಪ್ರವಚನ ನೀಡಿದರು.
ಎಲ್ಲರೂ ಇಲ್ಲಿ ಧರ್ಮದ ಮರ್ಮವನ್ನರಿತು ನಿತ್ಯವೂ ಅನುಷ್ಠಾನ ಮಾಡುತ್ತಿರುವುದರಿಂದ ಸದಾ ಧರ್ಮ ಜಾಗೃತವಾಗಿದ್ದು ಇಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆ. ಪರಿಶುದ್ಧವಾದ ಪ್ರಶಾಂತವಾದ ಪ್ರಾಕೃತಿಕ ಪರಿಸರ ಎಲ್ಲರಿಗೂ ಮನಕ್ಕೆ ಮದ ನೀಡುತ್ತಿದೆ ಎಂದರು.
ಪಾದರಕ್ಷೆ ಕಳಚಿ ಬರಿಗಾಲನಲ್ಲಿ ಮುನಿಗಳೊಂದಿಗೆ ನಡೆದುಕೊಂಡು ಬಂದ ಹೆಗ್ಗಡೆಯವರ ಸರಳ ವ್ಯಕ್ತಿತ್ವ ಮತ್ತು ಶ್ರದ್ಧಾ - ಭಕ್ತಿಯನ್ನು ಮುನಿಮಹಾರಾಜರು ಶ್ಲಾಘಿಸಿದರು. ನಾಲ್ಕು ಮಂದಿ ಮುನಿ ಮಹಾರಾಜರು ಹಾಗೂ ಆರ್ಯಿಕಾ ಶ್ರುತ ಮನೆ ಮಾತಾಜಿ ಸಂಘದವರು ಪುರಪ್ರವೇಶ ಮಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.