ಮಂಗಳೂರು: ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಅವರ ವಿರುದ್ಧ ಭಾರಿ ಪ್ರಮಾಣದ ಭೂಮಿ ಒತ್ತುವರಿ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಉಪಲೋಕಾಯುಕ್ತರು ಆದೇಶಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.ಮಂಗಳೂರು ನಗರದ ಅತ್ತಾವರ ಮತ್ತು ಜೆಪ್ಪಿನಮೊಗರು ಪ್ರದೇಶದಲ್ಲಿ ನೂರಾರು ಎಕರೆ ಭೂಮಿಯನ್ನು ಮಂಗಳೂರು ಬಿಷಪ್ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಭಾನುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಾಯುಕ್ತರಿಂದ ಸಾರ್ವಜನಿಕರ ದೂರುಗಳ ವಿಚಾರಣೆ ನಡೆಯಿತು. ಈ ಸಂದರ್ಭ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಉಪಲೋಕಾಯುಕ್ತ ಸುಭಾಷ್ ಆಡಿ ಆದೇಶ ಹೊರಡಿಸಿದ್ದಾರೆ.ಸಾರ್ವಜನಿಕ ದೂರುಗಳ ವಿಚಾರಣೆ ಸಂದರ್ಭದಲ್ಲಿ ನೂರಕ್ಕೂ ಅಧಿಕ ಮಂದಿ ಹಾಜರಾಗಿ, ಮಂಗಳೂರು ನಗರದ ಅತ್ತಾವರ ಹಾಗೂ ಜೆಪ್ಪಿನಮೊಗರು ಗ್ರಾಮದಲ್ಲಿರುವ ಸರಕಾರಿ ಪರಂಬೋಕು ಜಮೀನಿನಲ್ಲಿ ವಾಸವಿರುವವರನ್ನು ಒಕ್ಕಲೆಬ್ಬಿಸಿ, ಭೂಮಿಯನ್ನು ಒತ್ತುವರಿ ಮಾಡಲು ಮಂಗಳೂರು ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.