ಕುಂದಾಪುರ: ಯಾವುದೇ ಸಂಘ ಸಂಸ್ಥೆಯ ಮುಖ್ಯಸ್ಥರು ಕೇವಲ ಹುದ್ದೆಗೆ ಸೀಮಿತವಾಗಿದ್ದರೆ ಸಂಸ್ಥೆ ಅಭಿವೃದ್ಧಿ ಹೊಂದದು. ವಿಶಾಲ ಮನೋಭಾವದಿಂದ ಕಾರ್ಯ ತತ್ಪರರಾದರೆ ಮಾತ್ರ ಆ ಸಂಘಟನೆಗಳಿಂದ ಸಮಾಜಕ್ಕೆ ಏನಾದರೂ ಒಳಿತಗುತ್ತದೆ. ಮಾತ್ರವಲ್ಲ ಸಂಘಟನೆಯೂ ಬೆಳೆಯುತ್ತದೆ ಎಂದು ಉದ್ಯಮಿ ಸುರೇಂದ್ರ ಶೆಟ್ಟಿ ಹೇಳಿದರು.
ಕೋಟೇಶ್ವರದ ಶ್ರೀ ಮಹಾದೇವಿ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾ ವರ್ಧಂತಿ ಮತ್ತು ಶ್ರೀ ಮಾರಿಯಮ್ಮ ಸಾಂಸ್ಕೃತಿಕ ಸಂಘದ 26 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶ್ರೀ ಕೋಟಿಲಿಂಗೇಶ್ವರ ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ ಧಾರ್ಮಿಕ ಸಂದೇಶ ನೀಡಿ ನಮ್ಮ ಹಿರಿಯರು ದೇವಾಲಯಗಳನ್ನು ಕಟ್ಟಿದ್ದಾರೆ, ಪೂಜಾ ವಿಧಿ-ವಿಧಾನಗಳನ್ನೂ ತಿಳಿಸಿದ್ದಾರೆ. ಅವನ್ನು ನಾವು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಬೇಕು. ಮಾನವರು ಚಿತ್ತ ಶುದ್ದಿಗಾಗಿ ಸತ್ಕರ್ಮಗಳನ್ನು ಆಚರಿಸಬೇಕು ಎಂದು ಉಪನಿಷತ್ ತಿಳಿಸಿದೆ ಅದನ್ನು ನಾವು ಅರ್ಥಮಾಡಿಕೊಂಡು ಆಳವಡಿಸಿಕೊಳ್ಳಬೇಕು ಎಂದು ಕರೆನೀಡಿದರು. ಶ್ರೀ ಮಹಾದೇವಿ ಮಾರಿಯಮ್ಮ ದೇವಾಲಯದ ಆಡಳಿತ ಮೊಕ್ತೆಸರ ರಮೇಶ ಪೈ ಮಾತನಾಡಿ ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಎನ್.ಆರ್.ಎ.ಎಂ ಆಸ್ಪತ್ರೆ ವ್ಯವಸ್ಥಾಪಕ ಡಾ. ಎನ್. ಭಾಸ್ಕರ ಆಚಾರ್ಯ ಸಭಾಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಪ್ರಸಂಗ ಕರ್ತ ಬಸವರಾಜ ಶೆಟ್ಟಿಗಾರ, ಸುಬ್ಬಣ್ಣ ಶೆಟ್ಟಿ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಚನ್ನ ಮೇಸ್ತ್ರೀ ಉಪಸ್ಥಿತರಿದ್ದರು. ಸುಷ್ಮಿತಾ ಪ್ರಾರ್ಥಿಸಿದರು ಕಾರ್ಯದರ್ಶಿ ಸುಖೇಶ ಶೇಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸ್ಥಾಪಕ ಕಾರ್ಯದರ್ಶಿ ಕೆ.ಜಿ ವೈದ್ಯ, ಪಧಾಧಿಕಾರಿಗಳಾದ ರಾಘವೇಂಡ್ರ ಆಚಾರ್ಯ, ಮಂಜುನಾಥ ದೇವಾಡಿಗ ಮತ್ತು ಶೇಖರ ಜೋಗಿ ಅತಿಥಿಗಳನ್ನು ಗೌರವಿಸಿದರು.
ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಶ್ರೀ ಮಾರಿಯಮ್ಮ ದೇವಿಗೆ ಬ್ರಹ್ಮಕಲಶ ಸಹಿತ ಅಷ್ಟೋತ್ತರ ಶತ ಕಲಶಾಭಿಷೇಕ, ಕಲಾಭಿವೃದ್ದಿ ಹೋಮ, ವಿಶೇಷ ಪೂಜಾದಿಗಳನ್ನು ನೆರವೇರಿಸಲಾಯಿತು. ಮದ್ಯಾಹ್ನ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ, ರಾತ್ರಿ ಸಾಮಾಜಿಕ ನಗೆ ನಾಟಕ ನಡೆಯಿತು.