ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ 2019 ರ ಫೆಬ್ರವರಿ ತಿಂಗಳಿನಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಧರ್ಮಾಧಿಕಾರಿ ಹಾಗೂ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದ್ದಾರೆ.
ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಶನಿವಾರ ನಡೆದ ಬಾಹುಬಲಿ ಸ್ವಾಮಿ ಮೂರ್ತಿಯ ಮೂವತ್ತಾರನೇ ವರ್ಷದ ಪ್ರತಿಷ್ಠಾ ಮಹೋತ್ಸವ ವರ್ಧಂತ್ಯುತ್ಸವ ಹಾಗೂ 216 ಕಲಶಗಳಿಂದ ಪಾದಾಭಿಷೇಕ ನಡೆದ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.
ಪೂಜ್ಯ ಆಚಾರ್ಯ ವರ್ಧಮಾನ ಸಾಗರ್ಜಿ ಮುನಿ ಮಹರಾಜರ ನೇತೃತ್ವ ಹಾಗೂ ದಿವ್ಯ ಉಪಸ್ಥಿತಿಯೊಂದಿಗೆ ಶ್ರವಣಬೆಳಗೊಳದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದ್ದು ಈಗಾಗಲೇ ತಾವು ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.
36 ವರ್ಷಗಳ ಹಿಂದೆ ರತ್ನಗಿರಿ ದಟ್ಟ ಕಾಡಾಗಿದ್ದು ಬೆಂಗಳೂರಿನ ಖ್ಯಾತ ಜೋತಿಷಿ ಶಶಿಕಾಂತ ಜೈನ್ ಅಂದು ತಿಳಿಸಿದಂತೆ ಈ ಪವಿತ್ರ ಜಾಗ ಪುಣ್ಯ ಭೂಮಿಯಾಗಿ, ತೀರ್ಥ ಕ್ಷೇತ್ರವಾಗಿ ಈಗ ಬೆಳೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.