ಕಾರ್ಕಳ ತಾಲೂಕಿನ ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಡಾ. ಮಾಲತಿ ಪೈ ಎಚ್ ಅವರಿಗೆ ಕಲಾ ಸಂಕುಲ ಸಂಸ್ಥೆ ರಾಯಚೂರು ವತಿಯಿಂದ ನೀಡುವ ರಾಷ್ಟ್ರಮಟ್ಟದ `ಭಾರತ ಗೌರವ ಪ್ರಶಸ್ತಿ'ಲಭಿಸಿದ್ದು
ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಫೆಬ್ರವರಿ ೨ರಂದು ನಡೆದ ಕಲಾ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಸಾಹಿತಿ ಡಾ.ದೊಡ್ಡರಂಗೇ ಗೌಡರಿಗೆ ನಡೆದ ಅಭಿನಂಧನಾ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಪ್ರಶಸ್ತಿ ಪ್ರದಾನ ಮಾಡಿದರು.
ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪಡೆದಿರುವ ಬಿ.ಎ.ಬಿಎಡ್, ಹಿಂದಿ ಎಂ.ಎ. ಎಂಎಡ್ ಹಾಗೂ ಯೋಗ ಮತ್ತು ರೇಖಿ ವಿಜ್ಞಾನದಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಮಾಲತಿ ಪೈ ನಿಧಾನ ಕಲಿಕೆಯ ಮಕ್ಕಳ ಮೇಲೆ ಸಂಶೋಧನೆಯನ್ನು ಹಾಗೂ ವಿಕಲಚೇತನ ಮಕ್ಕಳ ಮೇಲೆ ಯೋಗ, ಪ್ರಾಣಾಯಾಮ ಮತ್ತು ಮುದ್ರೆಗಳ ಪ್ರಭಾವವನ್ನು ಸಾಮಥ್ಯನುಸಾರ ಸಂಶೋಧನೆ ಮಾಡಿ ಪ್ರಬಂಧ ಮಂಡಿಸಿ ಪಿಎಚ್ಡಿ ಪದವಿ ಪಡೆದಿದ್ದಾರೆ. ೧೯೯೭ರಲ್ಲಿ ಕಾರ್ಕಳ ತಾಲ್ಲೂಕಿನ ಪಡುಕುಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸರ್ಕಾರಿ ಸೇವೆಗೆ ಸೇರಿದ ಡಾ. ಮಾಲತಿ ಪೈ ಮುದ್ರಾಡಿ ಸರ್ಕಾರಿ ಶಾಲೆಯಲ್ಲಿ ಮತ್ತು ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಅಜೆಕಾರು ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದಾರೆ. ಸದಾ ಕ್ರೀಯಶೀಲಾರಾಗಿರುವ ಮಾಲತಿ ಪೈ ಬಹುಮುಖ ಪ್ರತಿಭೆ, ಸಾರ್ವಜನಿಕವಾಗಿ ನಿರಂತರ ಯೋಗ, ಪ್ರಾಣಾಯಾಮ, ಸಪ್ತ ವರ್ಣ ಮುದ್ರಾ ಯೋಗ ಶಿಬಿರ ಹಮ್ಮಿ ಕೊಳ್ಳುತ್ತಿದ್ದಾರೆ. ವಿವಿಧ ಜನಪದ ಕಲಾ ಪ್ರಕಾರಗಳಲ್ಲಿ ಅಭಿರುಚಿ ಹೊಂದಿರುವ ಇವರು ರಾಷ್ಟ್ರಮಟ್ಟದಲ್ಲಿ ಯಕ್ಷಗಾನದ ಪ್ರಬಂಧ ಮಂಡಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಬಿ.ವಿ.ನಾಯಕ, ಕವಿ ದೊಡ್ಡರಂಗೇಗೌಡರು ಉಪಸ್ಥಿತರಿದ್ದರು.