`ಪದ್ಮಭೂಷಣ ವಸಂತ್ದಾದಾ ಪಾಟೀಲ್ ಉತ್ಕೃಷ್ಟ ಸಹಕಾರಿ ಬ್ಯಾಂಕ್' ಗೌರವಕ್ಕೆ `ಭಾರತ್ ಬ್ಯಾಂಕ್' ಆಯ್ಕೆ
ಮುಂಬಯಿ, ಫೆ.07: ದಿ. ಮಹಾರಾಷ್ಟ್ರ ಸ್ಟೇಟ್ ಕೋ.ಆಪರೇಟಿವ್ ಬ್ಯಾಂಕ್'ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ) ಸಂಸ್ಥೆಯು ವಾರ್ಷಿಕವಾಗಿ ಪ್ರದಾನಿಸುವ `ಉತ್ಕೃಷ್ಟ ಬ್ಯಾಂಕ್ ಪುರಸ್ಕಾರ' ಈ ಬಾರಿಯೂ ತುಳು ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಸಂಸ್ಥೆಗೆ ಒಲಿದಿದೆ. ಈ ಬಾರಿ `ಪದ್ಮಭೂಷಣ ವಸಂತ್ದಾದಾ ಪಾಟೀಲ್ ಉತ್ಕೃಷ್ಟ ಸಹಕಾರಿ ಬ್ಯಾಂಕ್' ಗೌರವಕ್ಕೆ ಭಾರತ್ ಬ್ಯಾಂಕ್ ಭಾಜನವಾಗಿದೆ.
ಇದೇ ಫೆ.08ನೇ ಗುರುವಾರ ದಾದರ್ ಪಶ್ಚಿಮದ ಪ್ರಭಾದೇವಿ ಅಲ್ಲಿನ ಮಹಾರಾಷ್ಟ್ರ ಕಲಾ ಅಕಾಡೆಮಿ (ರವೀಂದ್ರ ನಾಟ ಮಂದಿರ್) ಇಲ್ಲಿ ಪೂರ್ವಾಹ್ನ 11.00 ಗಂಟೆಗೆ ಬ್ಯಾಂಕ್'ಸ್ ಅಸೋಸಿಯೇಶನ್ ಈ ಬಾರಿ ಆಯೋಜಿಸಿರುವ 22ನೇ ವಾರ್ಷಿಕ ಪಾರಿತೋಷಕ ವಿತರಣಾ ಭವ್ಯ ಸಮಾರಂಭದಲ್ಲಿ 2016-2017ರ ಹಣಕಾಸು ಸಾಲಿನ ಪ್ರಶಸ್ತಿಗಳನ್ನು ಪ್ರದಾನಿಸಲಿದೆ. ಸಮಾರಂಭದಲ್ಲಿ ಉಪಸ್ಥಿತ ಗಣ್ಯರ ಸಮ್ಮುಖದಲ್ಲಿ ವಿಜೇತ ಬ್ಯಾಂಕುಗಳಿಗೆ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದು ಎಂದು ಬ್ಯಾಂಕ್'ಸ್ ಅಸೋಸಿಯೇಶನ್ನ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದೆ.
ಅಸೋಸಿಯೇಶನ್ ವರ್ಷಂಪ್ರತಿ ಆಯ್ಕೆಗೊಳಿಸುವ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಮತ್ತು ಗುಣಮಟ್ಟದ ಬ್ಯಾಂಕ್ಗಳ ಸ್ಪರ್ಧೆಯಲ್ಲಿ ನೂರಾರು ಸಹಕಾರಿ ಬ್ಯಾಂಕುಗಳ ಪೈಕಿ ನಿರ್ಣಾಯಕರ ಆಯ್ಕೆ ಪ್ರಕ್ರಿಯೆಯಂತೆ ಭಾರತ್ ಬ್ಯಾಂಕ್ಗೆ ಈ ಗೌರವ ಪ್ರಾಪ್ತಿಸಿದೆ. ಭಾರತ್ ಬ್ಯಾಂಕ್ನ ಸರ್ವೋತ್ಕೃಷ್ಟ ಗ್ರಾಹಕ ಸೇವೆ, ಸಮಗ್ರ ವ್ಯವಹಾರ ಮತ್ತು ಗ್ರಾಹಕಸ್ನೇಹಿ ವಾರ್ಷಿಕ ವರದಿಗಾಗಿ ಪ್ರಥಮ ಸ್ಥಾನದೊಂದಿಗೆ ಗೌರವಿಸಲ್ಪಡಲಿದೆ ಎಂದು ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವಾತಿ ಪಾಂಡೆ ತಿಳಿಸಿದ್ದಾರೆ.
ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಕೇಂದ್ರವಾಗಿಸಿ ಆಯ್ಕೆ ಗೊಳಿಸುವ ಪ್ರತಿಷ್ಠಿತ ಮತ್ತು ಗುಣಮಟ್ಟದ ಸಹಕಾರಿ ಬ್ಯಾಂಕ್ಗಳ ಸ್ಪರ್ಧೆಯಲ್ಲಿ ಸರ್ವ ವಿಭಾಗಗಳಿಂದ ನಮ್ಮೆಲ್ಲರ ಭಾರತ್ ಬ್ಯಾಂಕ್ಗೆ ಈ ಬಾರಿ ಪ್ರಪ್ರಥಮ ಸ್ಥಾನಕ್ಕೆ ಆಯ್ಕೆಗೊಂಡಿರುವುದು ಅತೀವ ಆನಂದ ತಂದಿದೆ ಎಂದು ಅವರನ್ನು ಇಂದಿಲ್ಲಿ ಭೇಟಿ ನೀಡಿದ ಪತ್ರಕರ್ತರಲ್ಲಿ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
ಇದು ಬ್ಯಾಂಕ್ನ ಎಲ್ಲಾ ಗ್ರಾಹಕ ಬಂಧುಗಳ ಮತ್ತು ಕರ್ಮಚಾರಿಗಳ ತ್ವರಿತ ಸೇವೆಗೆ ಸಂದ ಗೌರವ. ಪುರಸ್ಕಾರ ವಿಷಯ ಅಭಿಮಾನ ತಂದಿದೆ ಎಂದು ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಅಭಿಮಾನ ವ್ಯಕ್ತ ಪಡಿಸಿದ್ದಾರೆ. ಈ ಪ್ರಶಸ್ತಿ ಮುಖೇನ ಬ್ಯಾಂಕ್ನ ಸೇವಾ ಮುಕುಟದ ಕಿರೀಟಕ್ಕೆ ಮತ್ತೊಂದು ಪ್ರಶಸ್ತಿಯ ಗರಿಯನ್ನು ಮುಡಿಸಿಕೊಂಡಿರುವುದು ನಮ್ಮೆಲ್ಲರಿಗೂ ಅಭಿಮಾನ ತಂದಿದೆ ಎಂದು ಬ್ಯಾಂಕ್ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ತಿಳಿಸಿದ್ದಾರೆ.
ಫೆ.08ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಬ್ಯಾಂಕ್ನ ಉಪ ಪ್ರಧಾನ ಪ್ರಬಂಧÀಕ ಹಾಗೂ ಅಭಿವೃದ್ಧಿ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ತಿಳಿಸಿದ್ದಾರೆ.