ಪುತ್ತೂರು : ‘ಪೂವರಿ’ ತುಳು ಮಾಸಿಕ ಪತ್ರಿಕೆ ಪ್ರಧಾನ ಸಂಪಾದಕ, ತುಳು ಸಂಘಟಕ ವಿಜಯಕುಮಾರ ಭಂಡಾರಿ ಹೆಬ್ಬಾರಬೈಲು ಇವರನ್ನು ಮೂಡುಬಿದಿರೆ ಸಮೀಪದ ಅಲಂಗಾರು ಬಡಗ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಯಲು ರಂಗ ಮಂದಿರದಲ್ಲಿ ನಡೆದ 9ನೇ ಅಖಿಲ ಕರ್ನಾಟಕ ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನದಲ್ಲಿ ತುಳು ಭಾಷೆ ಹಾಗೂ ತುಳು ಪತ್ರಿಕಾ ಕ್ಷೇತ್ರದಲ್ಲಿನ ವಿಶೇಷ ಸಾಧನೆಯನ್ನು ಪರಿಗಣಿಸಿ ‘ ಕರ್ನಾಟಕ ಸಾಧನಾ ಗೌರವ ಪ್ರಶಸ್ತಿ’ ನೀಡಿ ಪುರಸ್ಕರಿಸಿದೆ.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತುಳು ಕವಿ ಹೆಬ್ಬಾರಬೈಲು ಇವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಶುಭ ಹಾರೈಸಿದರು. ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಶೇಖರ ಅಜೆಕಾರು ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯ ಎನ್ಎಸ್ಎಸ್ ಬೆಂಗಳೂರು ಅಧಿಕಾರಿ ಡಾ. ಗಣನಾಥ ಎಕ್ಕಾರು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಮೂಡುಬಿದಿರೆ ಪತ್ರಕರ್ತರ ಸಂಘ ಅಧ್ಯಕ್ಷ ಸೀತಾರಾಮ ಆಚಾರ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ವಿಕುಭ ಹೆಬ್ಬಾರಬೈಲು, ಪ್ರಿಯಾ ಹೆಬ್ಬಾರಬೈಲು ಕಾವ್ಯನಾಮದಿಂದ ಚಿರಪರಿಚಿತರಾಗಿರುವ ಹೆಬ್ಬಾರಬೈಲು ಹಲವಾರು ಕೃತಿಗಳನ್ನು ಹೊರತಂದಿದ್ದಾರೆ. ಬಂಟ್ವಾಳ ತುಳು ಸಾಹಿತ್ಯ ಪರಿಷತ್, ಪುತ್ತೂರು ಜಾನಪದ ಸಾಹಿತ್ಯ ವೇದಿಕೆ, ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್, ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ವಿಟ್ಲ ವಲಯ ಅಧ್ಯಕ್ಷರಾಗಿ ಕೆಲಸ ಮಾಡಿದ ಇವರು ಪ್ರಸ್ತುತ ಪುತ್ತೂರು ತುಳು ಕೂಟದ ಅಧ್ಯಕ್ಷರಾಗಿದ್ದಾರೆ.