ಮಂಗಳೂರು: ಯಾರೋ ಅನಾಮಿಕರು ನನಗೆ ಹೆದರಿಸುವ ಪ್ರಯತ್ನ ಮಾಡಿದ್ದಾರೆ, ನನ್ನ ಕಾರು ಚಾಲಕನಿಗೆ ಬೆದರಿಕೆ ಹಾಕಲಾಗಿದೆ ಎಂದು ಚಿತ್ರನಟ ಪ್ರಕಾಶ್ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಯಾರೋ ನಾಲ್ಕು ಜನ ಬಂದು ನನ್ನ ಕಾರು ಚಾಲಕನ ಬಳಿ ನನ್ನ ಬಗ್ಗೆ ಪ್ರಶ್ನಿಸಿದ್ದಾರೆ, ನಾನು ಎಲ್ಲಿ ಉಳಿದುಕೊಳ್ಳುತ್ತೇನೆ ಎಂದು ಕೇಳಿದ್ದಾರೆ, ಪೊಲೀಸರು ಬಂದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.ಬಲಪಂಥೀಯರ ವಿರುದ್ಧ ಜಸ್ಟ್ ಆಸ್ಕಿಂಗ್ ಅಭಿಯಾನ ನಡೆಸುತ್ತಿರುವ ಚಿತ್ರನಟ ಪ್ರಕಾಶ್ ರೈ ಅವರು 'ನನಗೆ ಇಲ್ಲಿ ಆತಂಕದ ವಾತಾವರಣ ನಿರ್ಮಿಸಲಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.
ಈ ರೀತಿಯ ಹೆದರಿಕೆಗಳಿಗೆ ಬಗ್ಗುವುದಿಲ್ಲ ಎಂದ ಅವರು ಜಸ್ಟ್ ಆಸ್ಕಿಂಗ್ ಅಭಿಯಾನ ಮುಂದುವರೆಯಲಿದೆ ಎಂದರು. ರಾಜಕಾರಣದ ಬಗ್ಗೆಯೂ ಮಾತನಾಡಿದ ಅವರು 'ರಾಜಕೀಯದಲ್ಲಿ ಆತಂಕದ ವಾತಾವರಣ ಇದೆ, ನಾನು ಆಳುವ ಪಕ್ಷದ ವಿರೋಧಿಯಾಗಿದ್ದೇನೆ, ಒಬ್ಬ ಪ್ರಜೆ, ಪ್ರಜೆಯಾಗಿರೋದಕ್ಕೆ ಇಂದಿನ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತಿಲ್ಲ, ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.