ಅದ್ದೂರಿಯಾಗಿ ಸಂಭ್ರಮಿಸಲ್ಪಟ್ಟ ಶ್ರೀ ರಾಮ ನವಮಿ-ಬ್ರಹ್ಮ ರಥೋತ್ಸವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮಾ.26: ವಡಾಲದ ಕತ್ರಾಕ್ ರಸ್ತೆಯಲ್ಲಿನ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ದ್ವಾರಕನಾಥ್ ಭವನದ ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀರಾಮ ಮಂದಿರದಲ್ಲಿ ಇಂದಿಲ್ಲಿ ರವಿವಾರ ದಿನಪೂರ್ತಿಯಾಗಿ ಶ್ರೀ ರಾಮೋತ್ಸವ ವನ್ನು ವಿಧಿವತ್ತಾಗಿ ಆಚರಿಸಲ್ಪಟ್ಟಿತು. ನಿರಂತರ ಅಖಂಡ ರಾಮನಾಮ ಸಂಕೀರ್ತನೆಯೊಂದಿಗೆ ಪೂರ್ವ ಸಿದ್ಧತೆ ನಡೆಸಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ನಮಿತ ರಾಮ ನವಮಿ ಮಹೋತ್ಸವ ಅದ್ದೂರಿಯಾಗಿ ಸಂಭ್ರಮಿಸಿತು.
ಇಂದಿಲ್ಲಿ ಮುಂಜಾನೆಯಿಂದಲೇ ಶ್ರೀ ರಾಮ ಮಂದಿರ ಸಮಿತಿ ವಡಾಲ ಇದರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಉಪ ಸಮಿತಿ ಸೇರಿದಂತೆ ಭಕ್ತರನೇಕರು ವಿಶೇಷ ಪೂಜೆಗಳನ್ನು ನೆರವೇರಿಸಿದ್ದು, ಮಂದಿರದ ಪ್ರಧಾನ ಅರ್ಚಕ ಸುಧಾಮ ಅನಂತ ಭಟ್ ಮತ್ತು ಪುರೋಹಿತ ವರ್ಗವು ಬೆಳಿಗ್ಗೆ ಅಭಿಷೇಕ, ನೈವೇದ್ಯ ಪೂಜೆ, ಮಹಾಪೂಜೆ, ಮಹಾ ಮಂಗಳಾರತಿ, ಸಮಾರಾಧನೆ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಲಘು ವಿಷ್ಣು ಹವನ ಇತ್ಯಾದಿಗಳನ್ನು ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಸುಮಂಗಳೆಯರು ಶ್ರೀರಾಮನ ಪ್ರತಿಮೆಯನ್ನು ತೊಟ್ಟಿಲ್ಲರಿಸಿ ವಿಧಿವತ್ತಾಗಿ ರಾಮ ಜನ್ಮೋತ್ಸವ ನಡೆಸಿದರು. ಅಪರಾಹ್ನ ಶ್ರೀರಾಮನ ಪ್ರತಿಮೆ ರಥದಲ್ಲಿರಿಸಿ ಬ್ರಹ್ಮರಥೋತ್ಸವ ಸಂಭ್ರಮಿಸಿದರು.
ರಾಮನವಮಿ ಅಂಗವಾಗಿ ರಥ ವಾಸ್ತು ಶಾಂತಿ ಹವನ, ಸಮಾರಾಧನೆ, ರಥರೋಹಣ, ಬ್ರಹ್ಮರಥ ಸಮರ್ಪಣೆ, ರಥೋತ್ಸವ ನೆರವೇರಿಸಿ ಶ್ರೀರಾಮ ಜಯಂತ್ಯೋತ್ಸವ ಸಂಭ್ರಮಿಸಲಾಯಿತು. ಮಹಿಳಾ ಭಕ್ತೆಯರು ಸಾಂಪ್ರದಾಯಿಕ ವಿಧಿಗಳೊಂದಿಗೆ ಪೂಜಾಧಿಗಳನ್ನು ನೆರವೇರಿಸಿ ನಾಮಕರಣೋತ್ಸವ ನೆರವೇರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸೇವೆಗಳಿಂದ ರಾಮನವಮಿ ಅದ್ದೂರಿಯಾಗಿ ನಡೆಸಲ್ಪಟ್ಟಿತು.