ಮಂಗಳೂರು: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟ್ ರಸ್ತೆಯ 2ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಕ್ಷಿಪ್ರಗತಿಯಿಂದ ನಡೆಯುತ್ತಿದ್ದು, ಮೇ ಅಂತ್ಯದ ಒಳಗೆ ಪೂರ್ಣಗೊಂಡು ಜೂನ್ ಆರಂಭದಲ್ಲಿ ಸಂಚಾರಕ್ಕೆ ಮುಕ್ತವಾಗುವ ಭರವಸೆ ಕಂಡುಬಂದಿದೆ.
ರಾ. ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 13 ಕಿ.ಮೀ. ಕಾಂಕ್ರೀಟ್ ರಸ್ತೆ 2ನೇ ಹಂತದ ಕಾಮಗಾರಿಗೆ 74 ಕೋ. ರೂ. ಮಂಜೂರು ಆಗಿದ್ದು, ಜರ್ಮನಿಯಿಂದ ತರಿಸಲಾದ ಹೊಸ ಯಂತ್ರವನ್ನು ಬಳಸಿ ಆಧುನಿಕ ತಂತ್ರಜ್ಞಾನ ಆಧರಿಸಿ ಕಾಮಗಾರಿ ಬಹಳ ವೇಗವಾಗಿ ಸಾಗುತ್ತಿದೆ. ಈ ರಸ್ತೆಯಲ್ಲಿ 77 ಮೋರಿಗಳಿದ್ದು, 74 ಮೋರಿ ಕಾಮಗಾರಿ ಪೂರ್ಣಗೊಂಡಿದೆ. ಈ ಪೈಕಿ 3 ಸೇತುವೆಗಳ ವಿಸ್ತರಣೆಯೂ ನಡೆಯುತ್ತಿದೆ.