ವಿಜ್ಞಾನ ಹಾಗೂ ತಂತ್ರಜ್ಞಾನ ಮತ್ತು ಆಧ್ಯಾತ್ಮಿಕತೆಯ ಸಮನ್ವಯತೆಯಿಂದ ಶಾಂತಿ, ನೆಮ್ಮದಿ
ಉಜಿರೆ: ಸಮಾಜದಲ್ಲಿ ಧರ್ಮ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆಧ್ಯಾತ್ಮಿಕತೆಯ ಮಧ್ಯೆ ಸಮನ್ವಯ, ಸಾಮರಸ್ಯ ಇದ್ದಾಗ ಮಾತ್ರ ಆರೋಗ್ಯಪೂರ್ಣ ಜೀವನ ನಡೆಸಿ ಶಾಂತಿ, ನೆಮ್ಮದಿ ಹೊಂದಬಹುದು ಎಂದು ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ. ಕೆ. ಚಿದಾನಂದ ಗೌಡ ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ “ ತಂತ್ರಜ್ಞಾನದಲ್ಲಿ ಆಧುನಿಕ ವಿದ್ಯಮಾನಗಳು” ಎಂಬ ಅಂತರರಾಷ್ಟ್ರೀಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ನಾಗಾಲೋಟದ ಬೆಳವಣಿಗೆಯಲ್ಲಿ ನಾವು ಧರ್ಮವನ್ನು ಕಡೆಗಣಿಸಿದರೆ ಶಾಂತಿ, ನೆಮ್ಮದಿ ಹಾಗೂ ಸಂತೋಷ ಸಿಗುವುದಿಲ್ಲ. ನಮ್ಮ ಮನಸ್ಸು ಮತ್ತು ಹೃದಯ ಪರಿಶುದ್ಧವಾಗಿದ್ದು, ಪವಿತ್ರವಾದಾಗ ಮಾತ್ರ ಆಧ್ಯಾತ್ಮಿಕತೆಯೊಂದಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಜಪ, ತಪ, ಧ್ಯಾನ ಹಾಗೂ ಆಧ್ಯಾತ್ಮಿಕ ಚಿಂತನೆಯಿಂದ ಇದನ್ನು ಪಡೆಯಬಹುದು ಎಂದು ಋಷಿ, ಮುನಿಗಳು ಸಾಧಿಸಿ ತೋರಿಸಿದ್ದಾರೆ.
ಮಾನವ ವಿಕಾಸದ ಹಾದಿಯಲ್ಲಿ ಶಿಲಾಯುಗ, ಲೋಹಯುಗ, ಕೈಗಾರಿಕಾ ಕ್ರಾಂತಿಯ ಯುಗ, ತಂತ್ರಜ್ಞಾನದ ಯುಗ, ಎಲೆಕ್ಟ್ರಿಕಲ್ ಯುಗ, ವಿದ್ಯುನ್ಮಾನದ ಯುಗ, ವೆಬ್ ಯುಗ, ಮೊಬೈಲ್ ಯುಗ, ಜ್ಞಾನದ ಅಂತರಜಾಲ ಯುಗ - ಹಂತ ಹಂತವಾಗಿ ಬೆಳವಣಿಗೆಯಾಗಿದ್ದು 2030ರ ವೇಳೆಗೆ ವಸ್ತುಗಳ ಅಂತರಜಾಲ (Iಟಿಣeಡಿಟಿeಣ oಜಿ ಖಿhiಟಿgs – I.ಔ.ಖಿ) ಮೂಲಕ ಅತಿ ಹೆಚ್ಚು ಜನರು ಮತ್ತು ಅತಿ ಹೆಚ್ಚು ವಸ್ತುಗಳ ಮಧ್ಯೆ ಸಂಪರ್ಕ ಸಾಧ್ಯವಾಗುತ್ತದೆ. ನಾವು ಜ್ಞಾನಿಗಳು ಹಾಗೂ ಬುದ್ಧಿವಂತರಾಗುವುದರ ಜೊತೆಗೆ ಹೃದಯ ಶ್ರೀಮಂತಿಕೆಯನ್ನೂ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಶೋಧನೆ ಮಾಡುವಾಗ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿ ಯುವಜನತೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ, ಪ್ರೋತ್ಸಾಹ ನೀಡುವುದೇ ಕಾರ್ಯಗಾರದ ಉದ್ದೇಶವಾಗಿದೆ. ಇಡಿ ದಿನದ ಕಾಂiÀರ್iಗಾರದಲ್ಲಿ 154 ಮಂದಿ ಪ್ರಬಂಧಗಳನ್ನು ಮಂಡಿಸುವರು ಎಂದು ತಿಳಿಸಿದರು.
ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಡೀನ್ ಪ್ರೊ. ಎಸ್. ಆರ್. ಮಹಾದೇವ ಪ್ರಸನ್ನ ಮಾತನಾಡಿ ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿದ್ದು, ಆಧುನಿಕ ತಂತ್ರಜ್ಞಾನ ಬೋಧನೆಯಲ್ಲಿ ಪ್ರಾಧ್ಯಾಪಕರು ಕೂಡಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಕಾರ್ಯಗಾರದಲ್ಲಿ ಭಾಗವಹಿಸಿ, ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸುವುದರೊಂದಿಗೆ, ಸಂಶಯ, ಸಮಸ್ಯೆಗಳಿಗೆ ಪರಿಹಾರವನ್ನೂ ಪಡೆಯಬಹುದು.
ಎಲ್ಲಾ ಶಿಕ್ಷಣ ಸಂಸ್ಥೆಗಳೂ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚು ಬೆಂಬಲ ನೀಡಬೇಕು ಎಂದು ಅವರು ಹೇಳಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಬಗ್ಯೆ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಬೇಕೆಂದು ಅವರು ಹೆಗ್ಗಡೆಯವರನ್ನು ಕೋರಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ದಾಸರಾಗಬಾರದು, ಒಡೆಯರಾಗಬೇಕು: ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿಜ್ಞಾನದ ಬೆಳವಣಿಗೆಯಿಂದ ಇಂದು ಜೀವನ ಯಾಂತ್ರಿಕವಾಗಿದ್ದು ನಾವು ಮಾನವೀಯತೆಯನ್ನು ಕಳೆದುಕೊಳ್ಳಬಾರದು. ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ದಾಸರಾಗಬಾರದು, ಒಡೆಯರಾಗಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯನ್ನು ಗ್ರಾಮೀಣ ಪ್ರದೇಶದ ಜನರಿಗೆ ಪರಿಚಯಿಸಿದ್ದು ಕೃಷಿ, ಹೈನುಗಾರಿಕೆ, ನೀರಾವರಿ, ಗ್ರಾಮೀಣ ಗುಡಿ ಕೈಗಾರಿಕೆಯಲ್ಲಿ ಅವರು ಉನ್ನತ ಸಾಧನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಶ್ಲಾಘಿಸಿ ಅಭಿನಂದಿಸಿದ್ದಾರೆ ಎಂದು ಹೆಗ್ಗಡೆಯವರು ಹೇಳಿದರು.
ಪ್ರಪಂಚದ ಎರಡು ಮಹಾಯುದ್ಧಗಳು, ಸಂಘರ್ಷ ಹಾಗೂ ತೀವ್ರ ಪೈಪೋಟಿಯಿಂದಾಗಿ ತಂತ್ರಜ್ಞಾನದ ಬೆಳವಣಿಗೆಯಾಗಿದೆ. ಜೀವನ ಮಟ್ಟ ಸುಧಾರಿಸಿದೆ. ಸೌಲಭ್ಯಗಳು ಹೆಚ್ಚಾಗಿವೆ. ಬಾಹ್ಯಾಕಾಶ ವಿಜ್ಞಾನದಲ್ಲಿಯೂ ಸಾಕಷ್ಟು ಪ್ರಗತಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಮಾನವೀಯತೆ ಮತ್ತು ಸಾಮರಸ್ಯ ಇದ್ದಾಗ ಸುಖ-ಶಾಂತಿಯ ಜೀವನ ಸಾಧ್ಯ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.
ಡಾ. ಧರ್ಮಣ್ಣ ಸ್ವಾಗತಿಸಿದರು. ಪ್ರೊ. ಶ್ವೇತಾ ಎಸ್.ವಿ. ಧನ್ಯವಾದವಿತ್ತರು. ಪ್ರೊ. ಶುಭದಾ ಕಾರ್ಯಕ್ರಮ ನಿರ್ವಹಿಸಿದರು.
ಮುಖ್ಯಾಂಶಗಳು:
• ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆಧ್ಯಾತಮಿಕತೆ ಮಧ್ಯೆ ಸಮನ್ವಯ ಇರಬೇಕು.
• ಪ್ರಾರ್ಥನೆ, ಧ್ಯಾನದಿಂದ ಮನಸ್ಸು ಪವಿತ್ರವಾಗುತ್ತದೆ.
• ಪ್ರಗತಿಯ ಹೆಸರಿನಲ್ಲಿ ಮಾನವೀಯತೆ ಮರೆಯಬಾರದು
• ಆಧುನಿಕ ತಂತ್ರಜ್ಞಾನ ಬೋಧನೆಗೆ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕರು ಹರಸಾಹಸ ಮಾಡಬೇಕಾಗುತ್ತದೆ.
• ಕಾರ್ಯಗಾರದಿಂದ ಜ್ಞಾನ ವೃದ್ಧಿಯಾಗುತ್ತದೆ.
• ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ದಾಸರಾಗಬಾರದು, ಒಡೆಯರಾಗಬೇಕು.
• ಎಲ್ಲಾ ಶಿಕ್ಷಣ ಸಂಸ್ಥೆಗಳು ಸಂಶೋಧನೆಗೆ ಪ್ರೋತ್ಸಾಹ ನೀಡಬೇಕು.
• ಕಾರ್ಯಗಾರದಲ್ಲಿ 154 ಮಂದಿ ಪ್ರಬಂಧಗಳನ್ನು ಮಂಡಿಸಿದರು.