ಉಜಿರೆ: ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ರೋಗ ಬಾರದಂತೆ ತಡೆಗಟ್ಟಲು 2022 ರೊಳಗೆ ದೇಶದಲ್ಲಿ ಒಂದು ಲಕ್ಷದ ಐದು ಸಾವಿರ ಆರೋಗ್ಯ ಮತ್ತು ಕ್ಷೇಮ ಪಾಲನಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದ್ದು ಈ ವರ್ಷ ಹದಿನೈದು ಸಾವಿರ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಆಡಳಿತ ನಿರ್ದೇಶಕ ಮನೋಜ್ ಜಲಾನಿ ಹೇಳಿದರು.
ಅವರು ಶನಿವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರತಿಭಾವಂತ ಸಾಧಕರನ್ನು ಅಭಿನಂದಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸರ್ವರಿಗೂ ಆರೋಗ್ಯ ಭಾಗ್ಯ ನೀಡುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಆಯೋಗದ ಆಶ್ರಯದಲ್ಲಿ ರೋಗಿಗಳ ಶುಶ್ರೂಷೆಯೊಂದಿಗೆ ಆರೋಗ್ಯ ಸುಧಾರಣೆಗೆ ಸಕಾಲಿಕ ನೆರವು, ಮಾಹಿತಿ, ಮಾರ್ಗದರ್ಶನ ನೀಡಲಾಗುವುದು.
ಔಷಧಿ ರಹಿತ ಚಿಕಿತ್ಸಾ ವಿಧಾನವಾದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಇಂದು ವಿಶ್ವದೆಲ್ಲೆಡೆ ಗಮನ ಸೆಳೆಯುತ್ತದ್ದು ಗೌರವಿಸಲ್ಪಡುತ್ತದೆ. ಪ್ರತಿ ವರ್ಷ ಜೂನ್ 21 ರಂದು ವಿಶ್ವ ಆರೋಗ್ಯ ದಿನಾಚರಣೆ ಮಾಡಿ ಇದರ ಮಹತ್ವದ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಾಚೀನ ಭಾರತೀಯ ಚಿಕಿತ್ಸಾ ವಿಧಾನಗಳಾದ ಆಯುರ್ವೇದ, ಯೋಗ, ಯುನಾನಿ, ಸಿದ್ದ ಮತ್ತು ಹೋಮಿಯೋಪತಿ ಆರೋಗ್ಯ ಭಾಗ್ಯ ಕಾಪಾಡಲು ಸಹಕಾರಿಯಾಗಿವೆ. ಎಲ್ಲಾ ಪದ್ದತಿಗಳಲ್ಲಿರುವ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಮಾದರಿ ಸಮಗ್ರ ಚಿಕಿತ್ಸಾ ಪದ್ದತಿಯನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು. ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಮಾದರಿ ಸಮಗ್ರ ಚಿಕಿತ್ಸಾ ಪದ್ದತಿಯನ್ನು ರೂಪಿಸಬೇಕೆಂದು ಕೋರಿದ ಅವರು ಮುಂದೆ ಅದನ್ನು ಆರೋಗ್ಯ ಮತ್ತು ಕ್ಷೇಮ ಪಾಲನಾ ಕೇಂದ್ರಗಳಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಅಳವಡಿಸಲಾಗುವುದು. ಇದರಿಂದ ಕಲಿಯುವ ವಿದ್ಯಾರ್ಥಿಗಳಿಗೂ ಪ್ರಯೋಜನವಾಗುತ್ತದೆ. ಈ ಬಗ್ಯೆ ಸಚಿವಾಲಯದಿಂದ ಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ವಂದನಾ ಗುರ್ನಾನಿ ಶುಭಾಶಂಸನೆ ಮಾಡಿ ಎಸ್.ಡಿ.ಎಂ. ಸಂಸ್ಕøತಿಯನ್ನು ಶ್ಲಾಘಿಸಿ ಆರೋಗ್ಯ ರಕ್ಷಣೆಗಾಗಿ ನೀಡುತ್ತಿರುವ ಸೌಜನ್ಯಪೂರ್ಣ ನಗುಮೊಗದ ಸೇವೆಗೆ ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಔಷಧಿ ರಹಿತ ಚಿಕಿತ್ಸಾ ಕ್ರಮವಾದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ಬಗ್ಯೆ ಜನರಲ್ಲಿ ಅರಿವು, ಜಾಗೃತಿ ಮೂಡಿಸಬೇಕು. ಪ್ರಕೃತಿಯಿಂದ ವಿಮುಖರಾಗದೆ ಅದರೊಂದಿಗೆ ಹೊಂದಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು. ಭಾರತೀಯ ಚಿಕಿತ್ಸಾ ಪದ್ದತಿಗಳು ಇಂದು ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದು ಗೌರವಿಸಲ್ಪಡುತ್ತವೆ. ಪ್ರಕೃತಿ ಚಿಕಿತ್ಸಾ ವೈದ್ಯರು ಉತ್ತಮ ಸಂವಹನ ಕಲೆ ಬೆಳೆಸಿಕೊಳ್ಳಬೇಕು. ಕೀಳರಿಮೆ ತೊರೆದು, ಅಪಾರ ಗೌರವ, ನಂಬಿಕೆ ಮತ್ತು ಅಭಿಮಾನದಿಂದ ಪ್ರಕೃತಿ ಚಿಕಿತ್ಸಾ ಪದ್ದತಿಯ ರಾಯಬಾರಿಗಳಾಗಿ ಕೆಲಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಡಾ. ಜೋಸ್ನಾ ಕಾಲೇಜಿನ ವರದಿ ಸಾದರಪಡಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ಭಟ್ ಮತ್ತು ಬೆಳ್ತಂಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು.