ಮಂಗಳೂರು: ಕರಾವಳಿಯಲ್ಲಿ ಮಳೆರಾಯನ ಅಬ್ಬರ ಕೊಂಚ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮುದ್ರ ರಾಜನ ಆರ್ಭಟ ತಗ್ಗಿದೆ. ಕಳೆದ 5 ದಿನಗಳಿಂದ ಕರಾವಳಿಯ ಉದ್ದಕ್ಕೂ ಕಡಲಿನ ಅಲೆಗಳ ಹೊಡೆತ ಜೋರಾಗಿತ್ತು. ಈ ಪರಿಣಾಮ ಕರಾವಳಿಯಲ್ಲಿ ವ್ಯಾಪಕವಾಗಿ ಕಡಲ್ಕೊರೆತ ಆರಂಭವಾಗಿತ್ತು.ಆದರೆ ಕಳೆದ ರಾತ್ರಿಯಿಂದ ಮಂಗಳೂರು ಹೊರವಲಯದ ಉಳ್ಳಾಲ ಹಾಗೂ ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದ ಪ್ರಮಾಣ ಕಡಿಮೆಯಾಗಿದೆ.
ಕಡಲ ಅಲೆಗಳ ಅಬ್ಬರ ಕೊಂಚ ತಗ್ಗಿದೆ. ಈ ಹಿನ್ನಲೆಯಲ್ಲಿ ಉಳ್ಳಾಲ ಪ್ರದೇಶದ ಕೈಕೊ, ಕಿಲೇರಿಯಾ ನಗರ , ಮಕ್ಕಚೇರಿ ಯಲ್ಲಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಈ ಪ್ರದೇಶದಲ್ಲಿ ಅಪಾಯದಲ್ಲಿದ್ದ 41 ಮನೆಗಳನ್ನು ಉಳ್ಳಾಲ ನಗರಸಭೆ ಗುರುತಿಸಿದ್ದು, 20 ಕುಟುಂಬಗಳನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನುಳಿದವರು ರಾತ್ರಿ ವೇಳೆ ಸಂಬಂಧಿಕರ ಮನೆಗಳಿಗೆ ತೆರಳಿದ್ದರು. ಕಡಲ್ಕೊರೆತಕ್ಕೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ 8 ಮನೆಗಳು ಧ್ವಂಸಗೊಂಡಿದ್ದವು . ಕಡಲ ಭೋರ್ಗರೆತ ಹೆಚ್ಚಾಗಿದ್ದ ಕಾರಣ ಸ್ಥಳೀಯ ನಿವಾಸಿಗಳಲ್ಲಿ ಯಾವಾಗ ಏನಾಗುತ್ತೋ ಅನ್ನೋ ಜೀವ ಭಯ ಮನೆ ಮಾಡಿತ್ತು.