ಕಥಾಸಾಹಿತ್ಯಕ್ಕೆ ವ್ಯಕ್ತಿ-ಸಮಾಜ ಬದಲಾಯಿಸುವ ಶಕ್ತಿಯಿದೆ : ಥೋಮಸ್ ಡಿ’ಸೋಜಾ
ಮುಂಬಯಿ (ಕುಂಬಳೆ),ಜು.24: ಬದುಕಿನ ದೈನಂದಿನ ಆಗುಹೋಗುಗಳಿಗೆ ನಿಕಟವಾಗಿರುವ ಸಮಕಾಲೀನ ಕಥೆಗಳಿಗೆ ಸಾಹಿತ್ಯ ಪ್ರಪಂಚದಲ್ಲಿ ಬೇಡಿಕೆ ಇದೆ. ವ್ಯಕ್ತಿ ಕೇಂದ್ರಿತವಲ್ಲದ ವಸ್ತುಗಳನ್ನು ಹೆಚ್ಚು ಉತ್ಪ್ರೇಕ್ಷೆಗಳಿಲ್ಲದೆ ಕಟ್ಟಿಕೊಡುವ ಕಲೆಗಾರಿಕೆ ಯುವ ಕಥೆಗಾರರಲ್ಲಿ ಇರಬೇಕು ಎಂದು ಲೇಖಕಿ, ಕಥೆಗಾರ್ತಿ ಕೃಷ್ಣವೇಣಿ ಕಿದೂರು ಅಭಿಪ್ರಾಯ ವ್ಯಕ್ತಪಡಿಸಿದರು. ಪೆರ್ಲದ ಕವಿ ಹೃದಯದ ಸವಿಮಿತ್ರರು ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಸರಣಿ ಸಾಹಿತ್ತಿಕ ಕಾರ್ಯಕ್ರಮಗಳ ಭಾಗವಾಗಿ ಭಾನುವಾರ ಅಪರಾಹ್ನ ಸೀತಾಂಗೋಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ಐದನೇ ಸರಣಿ ಸಾಹಿತ್ಯ ಕಾರ್ಯಕ್ರಮ "ಕಥಾ ಸಲ್ಲಾಪ" ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಸರಗೋಡುನ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಕಥಾ ಸಾಹಿತ್ಯ ಪರಿಪುಷ್ಟವಾಗಿ ಬೆಳೆದು ಬಂದಿದೆ. ಎಂ.ವ್ಯಾಸ ಅಂತಹ ಮಹಾನ್ ಕವಿಗಳ ಕಥೆಗಳು ಯುವ ಕಥೆಗಾರರಿಗೆ ಮಾರ್ಗದರ್ಶಿಯಾಗಿದ್ದು, ಮನುಷ್ಯನ ನಿತ್ಯ ಜೀವನದ ನೋವು-ನಲಿವು-ಸಂಘರ್ಷ, ಅಚ್ಚರಿಗಳು ವಸ್ತು ವಿಷಯಗಳಾಗಿ ಕಥೆಗಳಾಗುವುದು ಮುಂದಿನ ತಲೆಮಾರಿಗೆ ಇತಿಹಾಸವಾಗಿ, ಬದುಕಿಗೆ ಮಾರ್ಗದರ್ಶಿಯಾಗಿ ನೆರವಾಗುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಾಹಿತಿ, ಲೇಖಕ, ಪುತ್ತಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜಾ ಮಾತನಾಡಿ, ಆಳವಾದ ಜೀವನಾನುಭವಗಳಿಂದ ಹೊರಹೊಮ್ಮುವ ಕಥಾ ಸಾಹಿತ್ಯ ವ್ಯಕ್ತಿ-ಸಮಾಜವನ್ನು ಬದಲಾಯಿಸುವ ಶಕ್ತಿ ಹೊಂದಿದೆ ಎಂದು ತಿಳಿಸಿದರು. ಹೆಚ್ಚು ಚಿಂತನೆಗಳಿಗೆ ಎಡೆಮಾಡುವ ಚಿಕ್ಕ-ಚೊಕ್ಕ ಕಥೆಗಳು ಇಂದು ಅಗತ್ಯವಿದ್ದು, ಯುವ ಕಥೆಗಾರರು ಹೆಚ್ಚು ಓದು ಮತ್ತು ಅನುಭವಗಳನ್ನು ಸಂಪಾದಿಸುವಲ್ಲಿ ಕ್ರಿಯಾಶೀಲರಾಗಬೇಕೆಂದು ಅವರು ಈ ಸಂದರ್ಭ ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಿಪಿಸಿಆರ್ಐಯ ಹಿರಿಯ ತಾಂತ್ರಿಕ ಅಧಿಕಾರಿ ಮುರಳೀಕೃಷ್ಣ ಹಳೆಮನೆ ಅವರು ಮಾತನಾಡಿ, ಕಲೆ-ಸಾಹಿತ್ಯಗಳು ಸಂಘರ್ಷ ರಹಿತ ಸಮಾಜ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಹೆಚ್ಚು ಕ್ರಿಯಾಶೀಲತೆ ಮತ್ತು ಧನಾತ್ಮಕ ಚಿಂತನೆಗಳಿಂದೊಡಗೂಡಿದ ಕಥಾ ಸಾಹಿತ್ಯ ಅಭಿವೃದ್ದಿಶೀಲ ಸಮಾಜದ ಪ್ರಾಮುಖ್ಯ ಅಂಗ ಎಂದು ತಿಳಿಸಿದರು.
ಕಲಾಗ್ರಾಮದ ನಿರ್ದೇಶಕ ಪ್ರಸಾದ್ ಮಣಿಯಂಪಾರೆ, ಪುತ್ತಿಗೆ ಗ್ರಾಮ ಪಂಚಾಯತು ಸದಸ್ಯ ಕೆ.ಮೊಹಮ್ಮದ್ ಕುಂಞÂ ಅತಿಥಿüಗಳಾಗಿ ಉಪಸ್ಥಿತರಿದ್ದರು. ಬಳಿಕ ನಡೆದ ಕಥಾಗೋಷ್ಠಿಯಲ್ಲಿ ಗೋಪಾಲಕೃಷ್ಣ ಭಟ್ ಕಟ್ಟತ್ತಿಲ,ಹರೀಶ್ ಪೆರ್ಲ, ಸನ್ನಿಧಿ ಟಿ.ರೈ, ಸಹನಾ ಡಿ., ಪದ್ಮಾವತಿ ಪೆರಡಾಲ, ಜ್ಯೋಸ್ನ್ಯಾ ಕಡಂದೇಲು, ಪಾರ್ವತಿ ಎಂ.ಭಟ್ ಕೂಳಕ್ಕೋಡ್ಳು, ಶಾರದಾ ಎಸ್.ಭಟ್ ಕಾಡಮನೆ, ರಾಜಶ್ರೀ ಟಿ.ರೈ, ಸುಭಾಶ್ ಪೆರ್ಲ, ಚೇತನಾ ಕುಂಬ್ಳೆ, ಶ್ವೇತಾ ಕಜೆ, ಶ್ಯಾಮಲಾ ರವಿರಾಜ್, ಚಿತ್ರಕಲಾ ಆಚಾರ್ಯ, ಲತಾ ಆಚಾರ್ಯ ಬನಾರಿ, ಸುಶೀಲಾ ಪದ್ಯಾಣ, ಪ್ರಭಾವತಿ ಕೆದಿಲಾಯ ಪುಂಡೂರು, ದಯಾನಂದ ರೈ ಕಲ್ವಾಜೆ, ಅಭಿಲಾಷ್ ಎಸ್.ಬಿ ಪೆರ್ಲ, ಚಿತ್ತರಂಜನ್ ಕಡಂದೇಲು ಸ್ವರಚಿತ ಕಥೆಗಳನ್ನು ವಾಚಿಸಿದರು.
ಕವಿ ಹೃದಯದ ಸವಿಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು. ಪುರುಷೋತ್ತಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ ರವಿರಾಜ್ ಪ್ರಾರ್ಥನಾ ಗೀತೆ ಹಾಡಿದರು.
ನಡೆದ ಸುಧೀರ್ಘ ಕಥಾಗೋಷ್ಠಿ, ಗಡಿನಾಡಿನ ಯುವ ಸಾಹಿತಿಗಳ ವೈವಿಧ್ಯ ಮಥೆಗಳೊಂದಿಗೆ ಸುಂದರವಾಗಿ ಮೂಡಿಬಂತು. ವಿದ್ಯಾರ್ಥಿಗಳಾದ ಚಿತ್ತರಂಜನ್ ಕಡಂದೇಲು, ಅಭಿಲಾಷ್ ಎಸ್.ಬಿ.ಪೆರ್ಲ ಹಾಗೂ ಸನ್ನಿಧಿ ಟಿ.ರೈ ಅವರ ಕಥೆಗಳು ಗಮನ ಸೆಳೆದವು. ರಾಜಶ್ರೀ ಟಿ.ರೈ ಹಾಗೂ ಶ್ವೇತಾ ಕಜೆ ತುಳು ಕಥೆಗಳನ್ನು ವಾಚಿಸಿದರು.