ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆ ಇಲ್ಲಿನ ಕೃಷಿಕರನ್ನು ಕಂಗೆಡಿಸಿದೆ. ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರ ಪ್ರಮುಖ ಬೆಳೆಯಾದ ಅಡಿಕೆ ಮಳೆಯಿಂದಾಗಿ ಸಂಪೂರ್ಣ ಹಾನಿಯಾಗುವ ಆತಂಕದಲ್ಲಿದ್ದಾರೆ ರೈತರು.ಕಳೆದ 50 ದಿನಗಳಿಂದ ಎಡೆಬಿಡದೆ ಮಳೆಯಾದ ಕಾರಣ ಕೃಷಿಕರಿಗೆ ಅಡಿಕೆಗೆ ಔಷಧಿ ಸಿಂಪಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯ ಬಹುತೇಕ ಎಲ್ಲಾ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.ದಕ್ಷಿಣಕನ್ನಡ ಜಿಲ್ಲೆಯ ಸಾವಿರಾರು ಕುಟುಂಬಗಳು ಅಡಿಕೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದೆ. ಆದರೆ ಮಳೆ ಈ ಬಾರಿ ಈ ಕೃಷಿಕರನ್ನು ಮತ್ತೆ ಸಂಕಷ್ಟಕ್ಕೆ ತಂದೊಡ್ಡುವ ಲಕ್ಷಣಗಳು ಗೋಚರಿಸಲಾರಂಭಿಸಿದೆ.
ಸಾಮಾನ್ಯವಾಗಿ ಅಡಿಕೆ ಹಿಂಗಾರ ಒಡೆದು ಎಳೆ ಅಡಿಕೆ ಬರುವ ಈ ಸಮಯದಲ್ಲಿ ಇವುಗಳಿಗೆ ಬೋಡೋ ದ್ರಾವಣ ಸಿಂಪಡಿಸುವುದು ವಾಡಿಕೆ.ಜುಲೈ ತಿಂಗಳಿಗೆ ಸಾಮಾನ್ಯವಾಗಿ ಎರಡನೇ ಬಾರಿಗೆ ಅಡಿಕೆಗೆ ಬೋಡೋ ದ್ರಾವಣ ಸಿಂಪಡಣೆಯನ್ನು ಕೃಷಿಕರು ಮಾಡಬೇಕಿತ್ತು. ಆದರೆ ಭಾರೀ ಮಳೆಯಿಂದಾಗಿ ಒಂದು ಬಾರಿಯೂ ಸಿಂಪಡಣೆ ಮಾಡಲಾರದ ಸ್ಥಿತಿಯನ್ನು ಮಳೆ ತಂದೊಡ್ಡಿದೆ. ಈ ಕಾರಣಕ್ಕಾಗಿ ಅಡಿಕೆ ಗಿಡಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಎಲ್ಲಾ ಭಾಗಗಳ ತೋಟದಲ್ಲಿರುವ ಅಡಿಕೆ ಗಿಡಗಳಿಂದ ಎಳೆ ಅಡಿಕೆಗಳು ಇದೀಗ ಉದುರಲಾರಂಭಿಸಿದೆ.ಕಳೆದ ಬಾರಿಯಂತೆ ಈ ಬಾರಿಯೂ ಅಡಿಕೆ ಕೃಷಿಕರು ಕೊಳೆರೋಗದಿಂದ ಕಂಗೆಡುವ ಲಕ್ಷಣಗಳು ಗೋಚರಿಸಲಾರಂಭಿಸಿದೆ. ಕೂಡಲೇ ಸರಕಾರ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಬೇಕೆಂಬ ಆಗ್ರಹವೂ ಕೇಳಿ ಬರುತ್ತಿದೆ.