ಮಂಗಳೂರು: ಕರಾವಳಿಯಲ್ಲಿ ಮಳೆ ಬಿರುಸುಗೊಂಡ ಹಿನ್ನಲೆಯಲ್ಲಿ ಕಡಲ ಅಬ್ಬರ ಕೂಡ ಹೆಚ್ಚಾಗಿದೆ. ಈ ಪರಿಣಾಮ ನಾಡದೋಣಿ ಮೀನುಗಾರಿಕೆಯೂ ಸ್ಥಗಿತ ಗೊಂಡಿದೆ.ಮಳೆಗಾಲದ ಮೀನುಗಾರಿಕಾ ನಿಷೇಧ ಅವಧಿ ಕೊನೆಗೊಳ್ಳುತ್ತಾ ಬರುತ್ತಿದೆ. ಆದರೆ ಕಡಲಲ್ಲಿ ಎದ್ದಿರುವ ತೂಫಾನ್ ನಿಂದಾಗಿ ನಾಡ ದೋಣಿ ಮೀನುಗಾರರು ಕಡಲಿಗಿಳಿಯದೇ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.
ಕಡಲಲ್ಲಿ ಏಳುತ್ತಿರುವ ಆಳೆತ್ತರದ ಅಲೆಗಳಿಂದಾಗಿ ಈ ಬಾರಿ ನಾಡದೋಣಿ ಮೀನುಗಾರರು ಸಮುದ್ರಕ್ಕೆ ಇಳಿಯಲೇ ಇಲ್ಲ. ಪ್ರತಿಕೂಲ ವಾತಾವರಣದಿಂದಾಗಿ ಕಡಲಿಗಿಳಿಯದ ನಾಡದೋಣಿ ಮೀನುಗಾರರಿಗೆ ಮತ್ಸ್ಯ ಕ್ಷಾಮ ಒಂದೆಡೆ ಬಾಧಿಸಿದರೆ ಇನ್ನೊಂದೆಡೆ ಪ್ರಕೃತಿ ವಿಕೋಪ ಗಾಯದ ಮೇಲೆ ಬರೆ ಎಳೆದಂತೆ ಆರ್ಥಿಕ ಹೊಡೆತ ನೀಡಿದೆ.ರಾಜ್ಯ ಕರಾವಳಿಯಲ್ಲಿ ಮಳೆಗಾಲ ಸಂದರ್ಭ ಆಳ ಸಮುದ್ರ ಮೀನುರಾರಿಗೆಗೆ ನಿಷೇಧ ಹೇರಲಾಗುತ್ತದೆ.
ಆದರೆ ಈ ನಿಷೇಧ ನಾಡದೋಣಿ ಮೀನುಗಾರಿಕೆಗೆ ಅನ್ವಯಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಮಳೆಗಾಲ ಆರಂಭವಾಯಿತೆಂದರೆ ಕರಾವಳಿಯಲ್ಲಿ ನಾಡದೋಣಿಗಳು ನೀರಿಗಿಳಿಯುತ್ತವೆ.ಆದರೆ ಈ ಬಾರಿ ಪರಿಸ್ಥಿತಿ ನಾಡದೋಣಿ ಮೀನುಗಾರರ ಕೈ ಹಿಡಿದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಆಳ ಸಮುದ್ರ ಮೀನುಗಾರಿಕಾ ಅವಧಿ ಆರಂಭಗೊಳ್ಳಲಿದೆ. ಈ ನಡುವೆ ಗಳಿಕೆಯ ಕನಸು ಕಂಡಿದ್ದ ನಾಡ ದೋಣಿ ಮೀನುಗಾರರು ನಿರಾಸೆ ಅನುಭವಿಸುತ್ತಿದ್ದಾರೆ.