ಸಂಘಟನಾತ್ಮಕ ಮುನ್ನಡೆ ಆಧುನಿಕ ಸಮಾಜದ ಅಗತ್ಯ : ಎಂ. ಉಮೇಶ್ ಸಾಲ್ಯಾನ್
ಮುಂಬಯಿ (ಮಂಜೇಶ್ವರ),ಜು.25: ಮನೋರಂಜನೆ ಸಹಿತ ಜನಸಾಮಾನ್ಯರ ಬದುಕಿಗೆ ಬೆಳಕಾಗಿರುವ ಕಲಾವಿದರು ಇಂದು ಅನುಭವಿಸುತ್ತಿರುವ ಸವಾಲುಗಳಿಗೆ ಧ್ವನಿಯಾಗಿ ಸವಾಕ್ ಕಾರ್ಯನಿರ್ವಹಿಸುತ್ತಿರುವು ದು ಭರವಸೆಯಾಗಿ ಬೆನ್ನೆಲುಬಾಗಿದೆ. ಸಂಘಟನಾತ್ಮಕವಾಗಿ ಮುನ್ನಡೆಯುವುದು ಆಧುನಿಕ ಸಮಾಜ ವ್ಯವಸ್ಥೆಯ ಅಗತ್ಯವಾಗಿದ್ದು, ಸವಾಕ್ನ್ನು ಇನ್ನಷ್ಟು ಬಲಗೊಳಿಸಬೇಕು ಎಂದು ಸವಾಕ್ ಜಿಲ್ಲಾಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ಕರೆನೀಡಿದರು.
ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ(ಸವಾಕ್) ನ ಮಂಜೇಶ್ವರ ಉಪಜಿಲ್ಲಾ ಸಮಾವೇಶವನ್ನು ಭಾನುವಾರ ಅಪರಾಹ್ನ ಮಂಜೇಶ್ವರದ ಕಲಾಸ್ಪರ್ಶಂ ಫೈನ್ ಆಟ್ರ್ಸ್ ಅಕಾಡೆಮಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಲಾವಿದರು ಮತ್ತು ಕಲಾಕ್ಷೇತ್ರಕ್ಕೆ ಸಂಬಂಧಿಸಿದ ಇತರ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವವ ರಿಗೆ ವಿಶೇಷ ಅನುದಾನಗಳು, ಯೋಜನೆಗಳನ್ನು ಸರಕಾರ ಜಾರಿಗೊಳಿಸಿದ್ದರೂ ಅನೇಕರಿಗೆ ಇದು ಲಭ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸವಾಕ್ ಸಂಘಟನೆ ಅಹರ್ನಿಶಿ ಕಾರ್ಯಾಚರಿಸಿ ನ್ಯಾಯಯುತ ನೆರವುಗಳನ್ನು ಒದಗಿಸಲು ಸಾಧ್ಯವಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಯಕ್ಷಗಾನ ಸಹಿತ ಗಡಿನಾಡು ಕಾಸರಗೋಡಿನ ಸಾಂಸ್ಕøತಿಕ ಪ್ರಕಾರಗಳಿಗೆ ರಾಜ್ಯ ಸರಕಾರ ಮನ್ನಣೆ ನೀಡುವ ನಿಟ್ಟಿನಲ್ಲಿ ಸವಾಕ್ ಕಾರ್ಯೋನ್ಮುಖವಾಗಿದೆ ಎಂದು ಅವರು ತಿಳಿಸಿದರು.
ಸವಾಕ್ ಬ್ಲಾಕ್ ಅಧ್ಯಕ್ಷ ಪ್ರಮೋದ್ ಪಣಿಕ್ಕರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತುಳಸೀಧರನ್ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಮುಖಂಡರಾದ ವೇಣುಗೋಪಾಲ ಶೇಣಿ, ಸುರೇಶ್ ಪಣಿಕ್ಕರ್, ಸುಶ್ಮಿತಾ ಆರ್ ಕುಂಬಳೆ, ಜಯಂತಿ ಸುವರ್ಣ ಅಡ್ಕ, ಸನ್ನಿ ಅಗಸ್ಟಿನ್, ಕಲಾಸ್ಪರ್ಶಂ ನಿರ್ದೇಶಕಿ ಜೀನ್ ಮೊಂತೇರೋ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹತ್ತನೇ ತರಗತಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆಯಾದ ಸವಾಕ್ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಂಗವಿಕಲ ಕಲಾವಿದ ಅಬ್ದುಲ್ ಕರೀಂ ಅವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು. ವಾರ್ಷಿಕ ವರದಿ ವಾಚಿಸಲಾಯಿತು.
ನೂತನ ಬ್ಲಾಕ್ ಸಮಿತಿಗೆ ಆಯ್ಕೆ ನಡೆಯಿತು. ಪ್ರಮೋದ್ ಪಣಿಕ್ಕರ್ (ಅಧ್ಯಕ್ಷ), ಚಂದ್ರಹಾಸ ಕಯ್ಯಾರು (ಪ್ರ. ಕಾರ್ಯದರ್ಶಿ), ಬಾಲಕೃಷ್ಣ ಮಾಸ್ತರ್ ಮಜಿಬೈಲು (ಕೋಶಾಧಿಕಾರಿ), ದಯಾನಂದ ಮಾಡ, ಸುಜಾತಾ ಮಂಜೇಶ್ವರ, ಎ.ಬಿ.ರಾಧಾಕೃಷ್ಣ ಬಲ್ಲಾಳ್ (ಉಪಾಧ್ಯಕ್ಷರು), ರಮೇಶ ಕುರೆಡ್ಕ, ಅಪ್ಪಣ್ಣ ಕೋಳ್ಯೂರು, ರವಿ ಎಂ.ಎಸ್ (ಜೊತೆ ಕಾರ್ಯದರ್ಶಿಗಳು) ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಎ.ಬಿ ರಾಧಾಕೃಷ್ಣ ಬಲ್ಲಾಳ್ ಸ್ವಾಗತಿಸಿದರು. ಕು| ರೇಷ್ಮ ಹಾಗೂ ಕು.ದೀಕ್ಷಾ ಸ್ವಾಗತ ನೃತ್ಯಗೈದರು. ಚಂದ್ರಹಾಸ ಕಯ್ಯಾರು ವಂದಿಸಿದರು.