ಬದಿಯಡ್ಕ: ಭರತ ಮುನಿ ಪ್ರಣೀತವಾದ ನಾಟ್ಯ ಶಾಸ್ತ್ರವು ರಾಷ್ಟ್ರದ ಸಾಂಸ್ಕøತಿಕ ಶ್ರೀಮಂತಿಕೆಯ ಪ್ರತೀಕವಾಗಿದ್ದು, ನೃತ್ಯಗಳು ಮನಸ್ಸಿಗೆ ಮುದ ನೀಡುವುದರೊಂದಿಗೆ ಭಗವಂತನ ಲೀಲಾಮಾನುಷತ್ವವನ್ನು ಬಿಂಬಿಸುವಲ್ಲಿ ಅಭಿನಯಗಳು ಹೆಚ್ಚು ಪ್ರಾಮುಖ್ಯತೆಪಡೆಯುತ್ತದೆ. ಜೊತೆಗೆ ಜಗತ್ತಿನ ನಿಯಂತ್ರಕನಾದ ಭಗವಂತನ ನಿರ್ದೇಶಾನುಸಾರ ನೋವು-ನಲಿವುಗಳ ಬದುಕಿನ ಸೂತ್ರ ಭಗವಂತನ ಕೃಪೆಯಂತೆ ನಡೆಸಲ್ಪಡುತ್ತದೆ ಎಂಬುದಕ್ಕೆ ಬೊಂಬೆಯಾಟಗಳು ಉಪಾಧಿಯಾಗಿವೆ ಎಂದು ಶ್ರೀಮದ್ ಎಡನೀರು ಮಠಾಧೀಶ ಕೇಶವಾನಂದ ಭಾರತೀ ಶ್ರೀಗಳು ಅನುಗ್ರಹ ಭಾಷಣ ನೀಡಿದರು.
ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಪಾದಂಗಳ 58ನೇ ಚಾತುರ್ಮಾಸ್ಯದ ಅಂಗವಾಗಿ ಶ್ರೀಮದ್ ಎಡನೀರು ಮಠದಲ್ಲಿ ಶನಿವಾರ ಸಂಜೆ ನಡೆದ ಭರತನಾಟ್ಯ ಹಾಗೂ ಬೊಂಬೆಯಾಟ ಸಾಂಸ್ಕøತಿಕ ಸಂಜೆಯಲ್ಲಿ ಅವರು ನೆರೆದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಯಕ್ಷಗಾನವನ್ನು ಬೊಂಬೆಯಾಟದ ಮೂಲಕ ಪರಿಣಾಮಕಾರಿಯಾಗಿ ಕಲಾಭಿಮಾನಿಗಳಿಗೆ ಮುಟ್ಟಿಸುವಲ್ಲಿ ಪರಿಣಾಮಕಾರಿ ಯಶಸ್ವಿ ಸಾಧ್ಯವಾಗಿದೆ. ಸೂತ್ರಗಳ ಮೂಲಕ ಪಾತ್ರಗಳನ್ನು ರಂಗ ಸಾಕ್ಷಾತ್ಕಾರಗೊಳಿಸುವ ಚಾಕಚಕ್ಯತೆ ವಿಶಿಷ್ಟವಾದುದು ಎಂದು ಅವರು ತಿಳಿಸಿದರು.
ಸಮಾರಂಭದ ಆರಂಭದಲ್ಲಿ ನೃತ್ಯ ವಿದುಷಿಯರಾದ ಅರ್ಥಾ ಪೆರ್ಲ ಮತ್ತು ಅಯನಾ ಪೆರ್ಲ ಅವರಿಂದ ಭರತನಾಟ್ಯ ವಿಶಿಷ್ಟವಾಗಿ ಪ್ರದರ್ಶಿಸಲ್ಪಟ್ಟಿತು. ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನೃತ್ಯ ಕಲಾ ಸಹೋದರಿಯರು ಒಂದೂವರೆ ಗಂಟೆಗಳ ಸುಧೀರ್ಘ ನೃತ್ಯ ಪ್ರದರ್ಶನ ನೀಡಿದರು. ಮಂಗಳೂರು ಆಕಾಶವಾನಿಯ ನಿವೃತ್ತ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ ನಿರ್ವಹಿಸಿದರು.
ಬಳಿಕ ಕಾಸರಗೋಡಿನ ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದವರಿಂದ ನಿರ್ದೇಶಕ ರಮೇಶ್ ಕೆ.ವಿ. ಯವರ ನೇತೃತ್ವದಲ್ಲಿ ನರಕಾಸುರ ವಧೆ-ಗರುಡ ಗರ್ವಭಂಗ ಪ್ರಸಂಗದ ಪ್ರದರ್ಶನ ನಡೆಯಿತು. ರಾಮಕೃಷ್ಣ ಮಯ್ಯ ಸಿರಿಬಾಗಿಲು(ಭಾಗವತರು), ಶಿವಶಂಕರ ಭಟ್ ಅಂಬೆಮೂಲೆ(ಚೆಂಡೆ), ರಾಮಚಂದ್ರ ರಾವ್ ಕಂಬಾರ್(ಮದ್ದಳೆ) ಮುಮ್ಮೇಳದ ಧ್ವನಿಗಳಲ್ಲಿ ರಾಮ ಹೆಮ್ಮಾಡಿ, ನಾರಾಯಣ ಹೆಮ್ಮಾಡಿ, ವಿದ್ಯಾ ಕೋಳ್ಯೂರು ಸಹಕರಿಸಿದರು. ಸೂತ್ರಧಾರಿಗಳಾಗಿ ರಮೇಶ್ ಕೆ.ವಿ, ತಿರುಮಲೇಶ ಕೆ.ವಿ, ಸುದರ್ಶನ ಕೆ.ವಿ, ಮನೋರಮಾ, ಪೂಜಾಶ್ರೀ. ಕೆ, ಕಾರ್ತಿಕ್ ಶರ್ಮಾ ಹಾಗೂ ಅನೀಶ್ ಪಿ ಸಹಕರಿಸಿದರು.
ಭಾನುವಾರ ಬೆಳಿಗ್ಗೆ ಚಾತುರ್ಮಾಸ್ಯದ ಭಾಗವಾಗಿ ವಿವಿಧ ವೈಧಿಕ, ಧಾರ್ಮಿಕ ವಿಧಿಗಳು ನೆರವೇರಿದವು. ಬೆಂಗಳೂರಿನ ರಾಷ್ಟ್ರಪ್ರಶಸ್ತಿ ವಿಜೇತ ಹುಸೇನ್ಸಾಬ್ ದಾಸ್ ರಿಂದ ದಾಸ ಸಂಕೀರ್ತನೆ ನಡೆಯಿತು.
ಮಂತ್ರಮುಗ್ದರಾಗಿಸಿದ ಸಂಕೀರ್ತನೆ:
ಪುರಂತರ ದಾಸರ ಸಂಕೀರ್ತನೆಗಳನ್ನು ಬಳಸಿ ವಿವಿಧ ಭಕ್ತಿ ಸಂಗೀತ ರಸಧಾರೆಯ ಮೂಲಕ ಎರಡೂವರೆ ಗಂಟೆಗಳ ನಿರಂತರ ದಾಸಸಂಕೀರ್ತನೆ ಅಸಂಖ್ಯ ಭಕ್ತರನ್ನು ಮಂತ್ರಮುಗ್ದರನ್ನಾಗಿಸಿತು. ಸಂಕೀರ್ತನೆಗಳ ಒಳಾರ್ಥಗಳನ್ನು ವಿವರಿಸುವ ಮೂಲಕ ಹುಸೇನ್ಸಾಬ್ ದಾಸ್ ಭಕ್ತಿಯ ಮಹತ್ವವನ್ನು ಮನಮುಟ್ಟುವಂತೆ ಪ್ರಸ್ತುತಪಡಿಸಿದರು. ಭಕ್ತಿ ಮತ್ತು ಸಂಕೀರ್ತನಾ ಆರಾಧನೆಗಳಿಗೆ ಆದ್ಯತೆ ನೀಡುತ್ತಿರುವ ಶ್ರೀಮದ್ ಎಡನೀರು ಮಠದ ಸಾಂಸ್ಕøತಿಕ ಪ್ರೋತ್ಸಾಹಗಳು ಎಲ್ಲೆಡೆಗಳಿಗೆ ಎಂದಿಗೂ ಮಾದರಿ ಎಂದು ಅವರು ಈ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಸಂಜೆ ಶ್ರೀಎಡನೀರು ಶ್ರೀಗಳ ಕೃತಿಗಳನ್ನಾಧರಿಸಿ ಗಾನ-ಜ್ಞಾನ-ಸುಧಾಗಾಯನ ಕಾರ್ಯಕ್ರಮ ಪ್ರಸ್ತುತಗೊಂಡಿತು. ವಿದ್ವಾನ್ ಕೆ.ವಿ.ಕೃಷ್ಣಪ್ರಸಾದ್ ಬೆಂಗಳೂರು ಗಾಯನ ನಡೆಸಿದರು. ಕೆ.ಎನ್.ವೆಂಕಟನಾರಾಯಣ್ ಬೆಂಗಳೂರು ನಿರೂಪಿಸಿದರು.
ಮಂಗಳವಾರ ಸಂಜೆ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷಬಳಗದವರಿಂದ ಸಮರ ಸೌಗಂಧಿಕಾ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.