ಉಡುಪಿ: ಯಕ್ಷಗಾನ ಕಲಾರಂಗ ಯಕ್ಷಗಾನ ವಿದ್ವಾಂಸರಿಗೆ ಕೊಡುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿಗೆ ಕಲಾವಿಮರ್ಶಕ, ಸಂಘಟಕ, ಅರ್ಥಧಾರಿ, ನಿವೃತ್ತ ಉಪನ್ಯಾಸಕ, ಹಿರಿಯ ವಿದ್ವಾಂಸ ಶ್ರೀಧರ ಡಿ.ಎಸ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ 24, 2015ರ ಭಾನುವಾರ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಲಿರುವುದು.
ದಿನಪೂತಿ೯ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ಸಾಧನಾವಲೋಕನ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರಾದ ಡಾ.ಎಂ. ಪ್ರಭಾಕರ ಜೋಶಿಯವರು ವಹಿಸಲಿದ್ದಾರೆ. ಪ್ರೊ.ಎಂ.ಎಲ್ ಸಾಮಾಗ, ಡಾ. ಪಾದೆಕಲ್ಲು ವಿಷ್ಣು ಭಟ್, ಶ್ರೀ ರಾಧಾಕೃಷ್ಣ ಕಲ್ಚಾರ್ ಅವಲೋಕನ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಅಪರಾಹ್ನ 2.00 ರಿಂದ 5.00 ಗಂಟೆಯವರೆಗೆ ಶ್ರೀಧರ ಡಿ.ಎಸ್ ವಿರಚಿತ ಭೃಗುಶಾಪ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ. ಬಲಿಪ ಪ್ರಸಾದ್ ಭಟ್, ಅಡೂರು ಲಕ್ಷ್ಮೀನಾರಾಯಣ ರಾವ್, ಲಕ್ಷ್ಮೀಶ ಬೆಂದ್ರೋಡಿ ಹಿಮ್ಮೇಳದಲ್ಲಿ, ಅರ್ಧಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಜಬ್ಬಾರ್ ಸಮೋ, ಸಂಕದಗುಂಡಿ ಗಣಪತಿ ಭಟ್, ಗಣರಾಜ ಕುಂಬಳೆ, ವಾಟೆಪಡ್ಪು ವಿಷ್ಣು ಶರ್ಮ ಅರ್ಥಧಾರಿಗಳಾಗಿ ಭಾಗವಹಿಸುತ್ತಾರೆ.
ಸಂಜೆ 5.00 ರಿಂದ 5.30ರ ವರೆಗೆ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ಕಾರ್ಯಕ್ರಮವಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 5.30ಕ್ಕೆ ಹಿರಿಯ ಯಕ್ಷಗಾನ ವಿದ್ವಾಂಸ ಹೊಸ್ತೋಟ ಮಂಜುನಾಥ ಭಾಗವತರ ಅಧ್ಯಕ್ಷತೆಯಲ್ಲಿ ಜರಗಲಿದೆ. ಡಾ.ಎಂ ರಾಧಾಕೃಷ್ಣ ಭಟ್ ಪೆರ್ಲ ಅಭಿನಂದನಾ ಭಾಷಣ ಮಾಡಲಿದ್ದಾರೆ. ಶ್ರೀ ಅಂಬಾತನಯ ಮುದ್ರಾಡಿ ಹಾಗೂ ಪ್ರೊ ಹೆರಂಜೆ ಕೃಷ್ಣ ಭಟ್ ಅಭ್ಯಾಗತರಾಗಿ ಭಾಗವಹಿಸುತ್ತಾರೆ. ಸಂಜೆ 6.30 ರಿಂದ 8.00 ವರೆಗೆ ಶ್ರೀಧರ ಡಿ.ಎಸ್ ವಿರಚಿತ ಸುದ್ಯುಮ್ನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ವಿದ್ವಾನ್ ಗಣಪತಿಭಟ್, ಎನ್.ಜಿ ಹೆಗಡೆ. ಕೆ.ಜೆ ಕೃಷ್ಣರ ಹಿಮ್ಮೇಳದಲ್ಲಿ ಗುರುನಂದನ ಸಾಗರ, ಮಂಕಿ ಈಶ್ವರ ನಾಯ್ಕ, ಡಾ. ಪ್ರದೀಪ್ ವಿ. ಸಾಮಗ ಮುಮ್ಮೇಳದ ಕಲಾವಿದರಾಗಿ ಭಾಗವಹಿಸಲಿದ್ದಾರೆ ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಕಾರ್ಯದಶಿ೯ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.