ಮುಂಬಯಿ ಆ.01: ಶ್ರೀ ಸುಬ್ರಹ್ಮಣ್ಯ ಮುಂಬಯಿ ಶಾಖೆಯ ಚೆಂಬೂರು ಛೆಡ್ಡಾನಗರದ ಶ್ರೀ ಸುಬ್ರಹ್ಮಣ್ಯ ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಇಂದಿಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ನಾಗರ ಪಂಚಮಿಯನ್ನು ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು.
ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಆಶೀರ್ವಚನದೊಂದಿಗೆ ಮುಂಜಾನೆಯಿಂದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪವಮಾನ ಹೋಮ, ಅಭಿಷೇಕ, ಸಾಮೂಹಿಕ ಅಶ್ಲೇಷಾ ಬಲಿ, ನವಕ ಪ್ರಧಾನ ಕಲಶ, ಹೋಮ, ಮಹಾಭಿಷೇಕ, ಅಲಂಕಾರ, ಮಹಾಪೂಜೆ, ನಾಗತನು ತರ್ಪಣ ಪ್ರಸನ್ನ ಪೂಜೆ ಮಂಗಳಾರತಿ, ತೀರ್ಥ ಪ್ರಸಾದ ಮತ್ತು ಅನ್ನಸಂತರ್ಪಣೆ ಮೊದಲಾದ ಸಾಂಸ್ಕೃತಿಕ ವಿಧಿ ವಿಧಾನಗಳನ್ನು ವೈಧಿಕವಾಗಿ ನೇರವೇರಿಸಲಾಗಿದ್ದು, ಸಾವಿರಾರು ಭಕ್ತಾಧಿಗಳು ಮಠಕ್ಕಾಗಮಿಸಿ ನಾಗದೇವರಿಗೆ ಪೂಜೆ ಸಲ್ಲಿಸಿದರು.
ಸಂಜೆ ಉಡುಪಿ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಪಟ್ಟಶಿಷ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಗಮಿಸಿ ನೆರೆದ ಭಕ್ತರನ್ನು ಅನುಗ್ರಹಿಸಿದರು. ಮಠದ ಶ್ರೀಪ್ರಸಾದ್ ಭಟ್ ಮತ್ತು ವಿಷ್ಣು ಕಾರಂತ್ ಅವರ ನೇತೃತ್ವದಲ್ಲಿ ನಾರಾವಿ ಗುರುರಾಜ ಭಟ್, ಬಾಲಕೃಷ್ಣ ಭಟ್ ಪೆರಂಪಳ್ಳಿ, ಕೃಷ್ಣ ಭಟ್ ಡೊಂಬಿವಿಲಿ, ಕೃಷ್ಣರಾಜ ಉಪಾಧ್ಯಾಯ ಮತ್ತಿತರ ಪುರೋಹಿತರ ಸಹಯೋಗದೊಂದಿಗೆ ಪೂಜೆಗಳನ್ನು ನೆರವೇರಿಸಿ ಪ್ರಸಾದ ವಿತರಿಸಿ ಹರಸಿದರು.