ಮಂಗಳೂರು: ಮಂಗಳೂರು ಹೊರವಲಯದ ಫರಂಗಿಪೇಟೆಯ ಮಾರಿಪಳ್ಳದಲ್ಲಿ ದುಷ್ಕರ್ಮಿಗಳ ತಂಡವೊಂದು ರೌಡಿಶೀಟರ್ ನೋರ್ವನನ್ನು ಕೊಲೆಗೈಯಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಹನೀಫ್ ಯಾನೆ ಮಾದ ಹನೀಫ್(38) ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಕಾರು ಮತ್ತು ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಕೃತ್ಯವೆಸಗಿ ಪರಾರಿಯಾಗಿದೆ.ಆಟೋ ಚಾಲಕ ರಿಫಾಯಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಈತ ಹತ್ತು ದಿನಗಳ ಹಿಂದೆ ಜೈಲಿನಿಂದ ಊರಿಗೆ ಬಂದಿದ್ದನೆಂದು ತಿಳಿದು ಬಂದಿದೆ. ಬುಧವಾರ ತನ್ನ ಸ್ನೇಹಿತನೊಂದಿಗೆ ಹೋಂಡಾ ಆ್ಯಕ್ಟೀವಾದಲ್ಲಿ ಬರುತ್ತಿದ್ದ ವೇಳೆ ಮಾರಿಪಳ್ಳದ ಕಟ್ಟೆ ಅಂಗಡಿ ಸಮೀಪ ಕಾರು ಮತ್ತು ಬೈಕಿನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಹನೀಫ್ ನನ್ನು ಸ್ಥಳೀಯರು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
2014ರ ಜೂ.21ರಂದು ನೌಷಾದ್ ಹತ್ಯೆಯ ಪ್ರತಿಕಾರವಾಗಿ ರಿಫಾಯಿ ಕೊಲೆ ನಡೆದಿತ್ತು. ಆದರೆ ರಿಫಾಯಿ ನೌಷಾದ್ ಕೊಲೆ ಆರೋಪಿಯ ಸಹೋದರನಾಗಿದ್ದ. ರಿಫಾಯಿಯನ್ನು ಚಿತ್ರಹಿಂಸೆ ನೀಡಿ ಕೊಲೆಗೈಯಲಾಗಿತ್ತು. ಇದೀಗ ರಿಫಾಯಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಹನೀಫ್ ನನ್ನು ಕೊಲೆ ನಡೆಸಲು ಯತ್ನಿಸಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.ಈ ನಡುವೆ ಘಟನಾ ಸ್ಥಳದಲ್ಲಿ ಗುಂಪುಗುಂಪಾಗಿ ಜನರು ಜಮಾಯಿಸಿದ್ದು, ಅಹಿತಕರ ಘಟನೆ ನಡೆಯದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿಚಾರ್ಜ್ ಮೂಲಕ ಗುಂಪನ್ನು ಚದುರಿಸಿದ್ದಾರೆ. ಘಟನಾ ಸ್ಥಳಕ್ಕೆ ದ.ಕ.ಎಸ್ಪಿ ಶರಣಪ್ಪ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.