ಮಂಗಳೂರು: ನಗರದಲ್ಲಿ ಹಾರ್ನ್ ಕಿರಿಕಿರಿ ಮಿತಿ ಮೀರುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾರ್ನ್ ಮುಕ್ತ ನಗರ ಎಂಬ ಅಭಿಯಾನ ಪ್ರಾರಂಭಿಸಬೇಕಿದೆ ಎಂದು ಶಾಸಕ ಜೆ.ಆರ್. ಲೋಬೋ ಕರೆ ನೀಡಿದರು.ದ.ಕ. ಜಿಲ್ಲಾಡಳಿತ, ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಆಯೋಜಿಸಲಾದ 27ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ-2016ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂಬ ಕಾನೂನು ಸ್ವಾಗತಾರ್ಹ ಹಾಗೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಹೇಳಿದ ಅವರು, ಸಂಚಾರ ಸುಧಾರಣೆಗೆ ಸಾರ್ವಜನಿಕರು ಟ್ರಾಫಿಕ್ ವಾರ್ಡನ್ ಆಗಿ ಟ್ರಾಫಿಕ್ ಪೊಲೀಸರ ಜತೆಗೆ ಸಹಕರಿಸಬೇಕು ಎಂದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಎಸ್.ಡಿ. ಶರಣಪ್ಪ ಮಾತನಾಡಿ, ಅಪಘಾತ ಆದ ಬಳಿಕ ಮಾತ್ರ ಸಾರ್ವಜನಿಕರು ಸಾರಿಗೆ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿದ್ದಾರೆ. ಇದು ಪ್ರತೀ ಕ್ಷಣದಲ್ಲೂ ಜಾಗೃತವಾಗಿದ್ದರೆ ಅಪಘಾತಗಳು ನಡೆಯದಂತೆ ನೋಡಿಕೊಳ್ಳಬಹುದು ಎಂದರು.
ವಿವಿಧ ವಾಹನಗಳ ಚಾಲನೆ ವೇಳೆ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿಕೊಳ್ಳಬೇಕು. ಚಾಲನೆ ಸಂದರ್ಭ ಮದ್ಯಪಾನ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ ಅವರು, ಬಸ್ ಡ್ರೈವರ್, ಕಂಡಕ್ಟರ್ಗಳು ಪ್ರಯಾಣಿಕರ ಜತೆ ಸೌಜನ್ಯದಿಂದ ನಡೆದುಕೊಳ್ಳುವಂತೆ ಬಸ್ ಮಾಲಕರು ಸೂಚಿಸಬೇಕು ಎಂದರು.ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ್ ಭಟ್ ಉದ್ಘಾಟಿಸಿ ಮಾತನಾಡಿ, ಚಾಲನಾ ಪರವಾನಿಗೆ ನೀಡುವ ವೇಳೆ ಸಾರಿಗೆ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲೇಬೇಕು. ನಗರದಲ್ಲಿ ಸುಗಮ ಸಂಚಾರಕ್ಕಾಗಿ ಕರ್ಣಾಟಕ ಬ್ಯಾಂಕ್ ವತಿಯಿಂದ ಬ್ಯಾರಿಕೇಡ್ಗಳನ್ನು ನೀಡುವುದಾಗಿ ತಿಳಿಸಿದರು.