ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳಕ್ಕೆ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮರಳು ಸಾಗಾಟವನ್ನು ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸರಕಾರವು 2009ರಂದು ಹೊರರಾಜ್ಯಗಳಿಗೆ ಮರಳು ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ ಕೆಲವರು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಿಂದ ಪರವಾನಿಗೆ ಪಡೆದು ದ.ಕ. ಜಿಲ್ಲೆಯಲ್ಲಿನ ಮರಳನ್ನು ಕೇರಳಕ್ಕೆ ಸಾಗಾಣಿಕೆ ಮಾಡುವುದು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಒಡಿಶಾ ರಾಜ್ಯದ ಬೆರ್ಮಾಪುರ್, ಗಾನಿಯಂ ಇಲ್ಲಿನ ಟ್ಯಾಕ್ಸ್ ಇನ್ವಾಯ್ಸ ಬಿಲ್ಲನ್ನು ಪಡೆದು ವಾಣಿಜ್ಯ ತೆರಿಗೆ ಮೊಹರನ್ನು ನಕಲು ಮಾಡಿ ಸಾಗಾಣಿಕೆ ಮಾಡುತ್ತಿರುವುದು ಪರಿಶೀಲನಾ ಸಭೆಯಲ್ಲಿ ಅರಿವಿಗೆ ಬಂದಿರುವುದರಿಂದ ನಿಷೇಧ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಆದೇಶದಲ್ಲಿ ತಿಳಿಸಿದ್ದಾರೆ.