ಮಂಗಳೂರು: ಮಂಗಳೂರು ಜೈಲಿನಲ್ಲಿ ಭದ್ರತೆ ತೀವ್ರಗೊಳಿಸಲು ಮೊಬೈಲ್ ಜಾಮರ್ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಅಲ್ಲದೇ ಹೆಚ್ಚಿನ ಸಿಸಿಟಿವಿ ಯನ್ನು ಜೈಲು ವ್ಯಾಪ್ತಿಯಲ್ಲಿ ಅಳವಡಿಸುವಂತೆ ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ. ದ.ಕ. ಜಿಲ್ಲಾ ಕಾರಾಗೃಹ ಸಂದರ್ಶಕ ಮಂಡಳಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೈಲಿನಲ್ಲಿ ಕೈದಿಗಳ ಗುಂಪುಗಳ ನಡುವೆ ಪದೇ ಪದೇ ಅಹಿತಕರ ಘಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದರು.ಮಂಗಳೂರು ಹೊರವಲಯದಲ್ಲಿ ನೂತನ ಕಾರಾಗೃಹ ನಿರ್ಮಾಣ ಸಂಬಂಧ ಜಾಗ ಕಾದಿರಿಸಲಾಗಿದೆ.
ಕಟ್ಟಡ ನಿರ್ಮಾಣ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ತಿಳಿಸಿದ ಅವರು, ಮಹಿಳಾ ಕೈದಿಗಳಿಗೆ ಜೈಲಿನಲ್ಲಿ ವೃತ್ತಿಪರ ತರಬೇತಿ ನೀಡುವ ಸಂಬಂಧ ಕ್ರಮ ಕೈಗೊಳ್ಳಲು ಜೈಲು ಅಧಿಕಾರಿಗಳಿಗೆ ಅವರು ನಿರ್ದೇಶ ನೀಡಿದರು. ಅಲ್ಲದೇ ಜೈಲಿನಲ್ಲಿ ಶಿಕ್ಷಣ ನೀಡಲು ನಿವೃತ್ತ ಶಿಕ್ಷಕರ ಸೇವೆ ಬಳಸಿಕೊಳ್ಳಲು ತಿಳಿಸಿದರು.
ಈ ಸಂದರ್ಭ ಜೈಲು ಅಧೀಕ್ಷಕ ವಿ. ಕೃಷ್ಣಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಶರಣಪ್ಪ ಮೊದಲಾದವರು ಉಪಸ್ಥಿತರಿದ್ದರು.