ಮಂಗಳೂರು: ಜಾಗತಿಕ ಮಟ್ಟದಲ್ಲಿ ಕಚ್ಚಾ ಪೆಟ್ರೋಲ್ ದರ ಸಾಕಷ್ಟು ಕಡಿಮೆಯಾಗಿದ್ದು, ದೇಶದಲ್ಲಿ ಪೆಟ್ರೋಲನ್ನು ಲೀಟರ್ಗೆ 30 ರೂ.ಗಳಲ್ಲಿ ಮಾರಾಟ ಮಾಡಬಹುದಾಗಿದೆ. ಆದರೆ, ಕೇಂದ್ರ ಸರಕಾರ ಅದಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ವಿದೇಶದಿಂದ ಕಪ್ಪು ಹಣವನ್ನು ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಚುನಾವಣೆಗೆ ಮುನ್ನ ನರೇಂದ್ರ ಮೋದಿ ತಿಳಿಸಿದ್ದರು.
ಆದರೆ ಇಲ್ಲಿಯವರೆಗೆ ಯಾರ ಖಾತೆಗೂ 15 ಪೈಸೆಯೂ ಬಿದ್ದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾಂಗ್ರೆಸ್ ಸಮರ್ಪಕವಾಗಿ ಆಡಳಿತ ನಡೆಸಿದೆ. ಜನರು ಸ್ವಾಭಿಮಾನದಿಂದ ದೇಶ-ವಿದೇಶಗಳಲ್ಲಿ ತಲೆಎತ್ತಿ ನಡೆಯುವ ಕೆಲಸಗಳಾಗಿವೆ. ಆದರೆ, ಹಿಂದಿನ ಸರಕಾರದಲ್ಲಿ ಮಾತ್ರ ತಲೆ ತಗ್ಗಿಸುವ ಕೆಲಸಗಳಾಗಿದ್ದವು.ಪ್ರಸ್ತುತ ತಾ.ಪಂ. ಹಾಗೂ ಜಿ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 80ರಷ್ಟು ಸ್ಥಾನವನ್ನು ಗೆಲ್ಲುವ ವಿಶ್ವಾಸವಿದೆ. ಕಾರ್ಯಕರ್ತರ ಉತ್ಸಾಹ, ಮತದಾರರ ಒಲವು ವರವಾಗಲಿದೆ ಎಂದರು.