ಮಂಗಳೂರು: ಅಮ್ಮನ ಸ್ಥಾನದಲ್ಲಿರುವ ನೆಲ, ಜಲ ಹಾಗೂ ಪರಿಸರ ಸಂರಕ್ಷಣೆ ಹಾಗೂ ಇದಕ್ಕೆ ವಿರುದ್ಧವಾಗಿ ಯಾವುದೇ ಯೋಜನೆಗಳು ಬಂದರೂ ಅವುಗಳ ವಿರುದ್ಧ ಹೋರಾಟ, ಅನ್ನದಾತ ರೈತನಿಗೆ ಸಂಕಷ್ಟಗಳು ಎದುರಾದಾಗ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮೇಲೆ ಆಗ್ರಹ ಹಾಗೂ ಪ್ರಭಾವ ಬೀರಿ ಪರಿಹಾರ ಕಂಡುಕೊಳ್ಳುವ ದೃಢ ಸಂಕಲ್ಪ, ಅಕ್ಷರ ಕಲಿಯುವ ಸೌಲಭ್ಯದಿಂದ ವಂಚಿತರಾದ ಮಕ್ಕಳು ಶಾಲೆಗೆ ಬರುವಂತಹ ಪೂರಕ ವಾತಾವರಣ ನಿರ್ಮಾಣದ ಬದ್ಧತೆ ಹಾಗೂ ಗ್ರಾಮಾಂತರ ಪ್ರದೇಶಗಳ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆಯನ್ನು ಪರಿಹರಿಸುವುದು ಹಾಗೂ ಖಾಲಿ ಇರುವ ಹುದ್ದೆಗಳ ಭರ್ತಿ ಮುಂತಾದ ಅಂಶಗಳನ್ನು ಒಳಗೊಂಡ ಅಮ್ಮ, ಅನ್ನ, ಅಕ್ಷರ ಮತ್ತು ಆರೋಗ್ಯ ಭರವಸೆಯ ಪ್ರಣಾಳಿಕೆಯನ್ನು ದ.ಕ. ಜಿಲ್ಲಾ ಬಿಜೆಪಿ ಬಿಡುಗಡೆಗೊಳಿಸಿದೆ.ದ.ಕ. ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.
ಬಿಜೆಪಿ ಸಂಕಲ್ಪ
ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಮೂಲಕ ಅಂತರ್ಜಲದ ರಕ್ಷಣೆ, ಬೆಳೆಗಳ ಬೆಲೆ ಕುಸಿತ ಆದಾಗ ವೈಜ್ಞಾನಿಕ ಬೆಂಬಲ ಬೆಲೆ ದೊರಕಿಸಲು ಪ್ರಯತ್ನ, ಕುಮ್ಮಿ ಹಕ್ಕು ಹಾಗೂ ಗೇರು ಕೃಷಿಕರ ಹಕ್ಕು ಕಸಿಯುವ ಸರಕಾರದ ಕ್ರಮದ ವಿರುದ್ಧ ಹೋರಾಟ, ಕೇಂದ್ರ ಸರಕಾರದ ಬೆಳೆವಿಮಾ ಯೋಜನೆ ಜಾರಿಗೆ ಪಂಚಾಯತ್ ವ್ಯವಸ್ಥೆಗಳ ಸಮರ್ಥ ಬಳಕೆ, ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ದೊರಕಿಸುವಲ್ಲಿ ಪಕ್ಷ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ನಿರಂತರ ಪ್ರಯತ್ನ, ಗ್ರಾಮಾಂತರ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಸರಕಾರಿ ಶಾಲೆಗಳಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣೆ, ಸ್ವಚ್ಛ ಕುಡಿಯುವ ನೀರು ಪೂರೈಕೆ ಮುಂತಾದವು ಈ ಬಾರಿಯ ಚುನಾವಣೆಯಲ್ಲಿ ನಮ್ಮ ಸಂಕಲ್ಪವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ವಿವರಿಸಿದರು.