ಮಂಗಳೂರು: ತಮ್ಮಲ್ಲಿರುವ 70 ಲಕ್ಷ ಮೌಲ್ಯದ ದುಬಾರಿ ವಾಚನ್ನು ಮೊದಲು ಹರಾಜು ಹಾಕಿ. ಅದರಿಂದ ಬಂದ ಹಣವನ್ನು ಸಿಯಾಚಿನ್ ಹಿಮಪಾತಕ್ಕೆ ಬಲಿಯಾದ ರಾಜ್ಯದ ಮೂರು ಯೋಧರ ಕುಟುಂಬಗಳಿಗೆ ಪರಿಹಾರ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಸಲಹೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀವು ಈ ರೀತಿ ಮಾಡಿದರೆ ಚರಿತ್ರೆಯಲ್ಲಿ ಒಬ್ಬ ವ್ಯಕ್ತಿಯಾಗುತ್ತೀರಿ. ನಾಡಿನ ಆರು ಕೋಟಿ ಜನತೆ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂದಿದ್ದಾರೆ. ವೀರ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಮಡಿದಾಗ ತಾವು ಎರಡು ದಿನ ಹುಬ್ಬಳ್ಳಿಯಲ್ಲಿದ್ದು, ಸ್ಪಂದಿಸಿದ ರೀತಿ ಮಾದರಿಯಾಗಿದೆ.ಯೋಧನ ಕುಟುಂಬಕ್ಕೆ 25 ಲಕ್ಷ ಸಹಾಯ, ನಾಲ್ಕು ಎಕರೆ ಭೂಮಿ, ಕುಟುಂಬದ ಒಬ್ಬರಿಗೆ ಉದ್ಯೋಗದ ಭರವಸೆ ನೀಡಿದ್ದೀರಿ. ಇದು ನಿಮ್ಮ ಹೃದಯ ವೈಶಾಲ್ಯತೆ ತೋರಿಸುತ್ತದೆ. ಜನ ಮೆಚ್ಚುವಂತಹ ಕೆಲಸವನ್ನು ಮಾಡಿದ್ದೀರಿ.
ಆದರೆ ಈ ವಾಚ್ ನಿಮ್ಮ ಶುದ್ಧ ಚಾರಿತ್ರ್ಯಕ್ಕೊಂದು ಕಪ್ಪುಚುಕ್ಕೆಯಾಗಿದೆ ಎಂದರು.ನೀವು ಇಷ್ಟೊಂದು ದುಬಾರಿ ಮೌಲ್ಯದ ವಾಚ್ ಧರಿಸುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಿದೆ. ಪಕ್ಷಕ್ಕಿದು ಶಕ್ತಿ ತುಂಬುತ್ತದೆಯೇ? ವಿಪಕ್ಷಗಳ ಟೀಕೆ ಬಿಡಿ, ಅವರ ಚರಿತ್ರೆ ಗೊತ್ತಿದೆ. ಆದರೆ ಕಾರ್ಯಕರ್ತರು ಇದಕ್ಕೆ ಹೇಗೆ ಉತ್ತರಿಸಬೇಕು? ಹಿಂದೆ ಮೋದಿಯವರು ದುಬಾರಿ ಸೂಟ್ ಹಾಕಿದ್ದಾಗ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದರು. ಆದರೆ ಈಗ ಕಾರ್ಯಕರ್ತರು ಏನು ಹೇಳಲು ಸಾಧ್ಯ? ಸೋನಿಯಾ, ರಾಹುಲ್ ಪ್ರಶ್ನಿಸಿದರೆ ಏನು ಹೇಳುತ್ತೀರಿ? ಆದ್ದರಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳಿ. ಜನತೆ ಕ್ಷಮಿಸುತ್ತಾರೆ ಎಂದು ಹೇಳಿದರು.