ಮುಂಬಯಿ (ಆರ್ಬಿಐ), ಮೇ.01: ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಯ ಶೃಂಗೇರಿ ಶಾರದಾ ಪೀಠದ ಪರಮ ಪೂಜ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಕರಕಮಲ ಸಂಜಾತರಾದ ಪರಮ ಪೂಜ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಕಳೆದ ಭಾನುವಾರ ಕೊಂಡೆವೂರು ಶ್ರೀ ಮಠಕ್ಕೆ ಚಿತ್ತೈಸಿ ಭಕ್ತ ವೃಂದರನ್ನು ಅನುಗ್ರಹಿಸಿದರು.
ಗೋಶಾಲೆಗೆ ಭೇಟಿ ನೀಡಿದ ಜಗದ್ಗುರುಗಳು ಗೋವಿಗೆ ಗೋಗ್ರಾಸ ನೀಡಿದ್ದು, ಬಳಿಕ ನಕ್ಷತ್ರವನಕ್ಕೆ ಭೇಟಿ ಕೊಟ್ಟು ವನದಲ್ಲಿ ಅಪರೂಪದ `ಕೃಷ್ಣಾಲ' ಗಿಡವನ್ನು ನೆಟ್ಟು ನಂತರ ನೂತನ ಅತಿಥಿ ಗೃಹಕ್ಕೆ ಶಿಲಾನ್ಯಾಸ ನೆರವೇರಿಸಿದರು.
ನಂತರ ಐಲದ ಶಿವನಾಂದ ಮಯ್ಯ ಬಳಗದ ವೇದ ಘೋಷದೊಡನೆ ಅರಂಭಗೊಂಡಿತು. ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಕೊಂಡೆವೂರುಶ್ರೀಗಳು ಮಠದ ಮತ್ತು ಸಮಸ್ತ ಭಕ್ತವೃಂದರವರ ಪರವಾಗಿ ಜಗದ್ಗುರುಗಳವರನ್ನು ಅಭಿವಂದಿಸಿದರು.
ಜಗದ್ಗುರುಗಳವರು ಆಶೀರ್ವಚನಗೈದು ಶಂಕರಾಚಾರ್ಯರು ಅವತರಿಸಿದ ಪ್ರಾಂತ್ಯದಲ್ಲಿ ಈ ಸವಾಲುಗಳ ಮಧ್ಯೆ ಧಾರ್ಮಿಕ ಮತ್ತು ಸಾಮಾಜಿಕ ಚಟುವಟುಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಈ ಕಾರ್ಯಕ್ಕೆ ತಮ್ಮ ಬೆಂಬಲ ಹಾಗೂ ಆರ್ಶಿವಾದವಿದೆ ಎಂದರು. ಹಾಗೂ ಸರಸ್ವತಿ ಪ್ರಸಾದವನ್ನು ನೀಡಿ ಹರಸಿದರು.
ಕೇರಳದಲ್ಲಿ 400ಕ್ಕೂ ಅಧಿಕ ದೇವಸ್ಥಾನ ಜೀರ್ಣೋದ್ದಾರ ನಡೆಸಿದ ಶ್ರೀ ರಾಜೀವ್ ರನ್ನು ಮತ್ತು ಶೃಂಗೇರಿ ಮಠದ ಆಡಳಿತಾಧಿಕಾರಿ ಪಿ.ಎ ಮುರಳಿ ಅವರನ್ನು ಜಗದ್ಗುರುಗಳ ಸಮ್ಮುಖದಲ್ಲಿ ಸನ್ಮಾನಿಸಲಾಗಿ ಕಾಸರಗೋಡು ಜಿಲ್ಲೆಯ ಅನೇಕ ಪ್ರಮುಖ ದೇವಸ್ಥಾನಗಳ ವತಿಯಿಂದ ಜಗದ್ಗುರುಗಳನ್ನು ಅಭಿವಂದಿಸಲಾಯಿತು.
ರಾಜಾರಾಮ್ ಮೀಯಪದವು ಅಭಿವಂದನಾ ಪತ್ರವನ್ನು ವಾಚಿಸಿದರು. ಗಂಗಾಧರ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು. ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ವಂದಿಸಿದರು.