ಮಂಗಳೂರು: ನೇತ್ರಾವತಿ ನದಿ ತಿರುವು ಯೋಜನೆ ಹೋರಾಟಕ್ಕೆ ಸ್ಪಂದಿಸದ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಬೇಕೆಂಬ ಉದ್ದೇಶದಿಂದ ಈ ಬಾರಿಯ ಜಿ.ಪಂ. , ತಾ.ಪಂ. ಚುನಾವಣೆಯಲ್ಲಿ ಸಹ್ಯಾದ್ರಿ ಸಂಚಯ ತಂಡ ನೋಟಾ ಅಭಿಯಾನವನ್ನು ಕೈಗೊಂಡಿತ್ತು. ಚುನಾವಣೆಯಲ್ಲಿ ಇದಕ್ಕೆ ಉತ್ತಮ ಸ್ಪಂದನೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಸಂದರ್ಭದೊಳಗೆ ಎತ್ತಿನಹೊಳೆ ಯೋಜನೆಯನ್ನು ಯಾವುದೇ ರಾಜಕೀಯ ಪಕ್ಷ ತಡೆಯದೇ ಇದ್ದಲ್ಲಿ ಜಿಲ್ಲೆಯಾದ್ಯಂತ ನಗರ ಮತ್ತು ಹಳ್ಳಿ ಪ್ರದೇಶಗಳಿಗೆ ಹೋಗಿ ನೇತ್ರಾವತಿ ನದಿ ತಿರುವು ಯೋಜನೆ ಬಗ್ಗೆ ಮತ್ತು ಈ ಯೋಜನೆ ಬೆಂಬಲಿಸುವ ಜನಪ್ರತಿನಿಧಿಗಳಿಗೆ ನೋಟಾ ಮತ ನೀಡಿ ತಿರಸ್ಕರಿಸುವ ಬೃಹತ್ ಕಾರ್ಯರೂಪವನ್ನು ಸಹ್ಯಾದ್ರಿ ಸಂಚಯ ಮಾಡಲಿದೆ ಸಂಚಯದ ಪ್ರಮುಖ ದಿನೇಶ್ ಹೊಳ್ಳ ತಿಳಿಸಿದ್ದಾರೆ..
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಹ್ಯಾದ್ರಿ ಸಂಚಯ ನೋಟಾ ಅಭಿಯಾನವನ್ನು ಕೈಗೊಂಡಿದ್ದಾಗ 7,800 ನೋಟಾ ಮತಗಳು ಲಭಿಸಿದ್ದು, ಈ ಬಾರಿ (28,817 ಮತಗಳು) ಅದರ ನಾಲ್ಕು ಪಟ್ಟು ಹೆಚ್ಚು ಮತಗಳು ಲಭಿಸಿದ ಕಾರಣ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಧಕ್ಕೆಯಾಗುವುದಂತೂ ಖಂಡಿತ. ಜತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಜನಾಕ್ರೋಶವನ್ನು ಒಟ್ಟು ಸೇರಿಸಿ ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸುವ ರೀತಿಯಲ್ಲಿ, ಅವರನ್ನು ಸೋಲಿಸುವ ಪಣ ತೊಟ್ಟು ನೇತ್ರಾವತಿ ಪರವಾಗಿ ಅಭ್ಯರ್ಥಿಗಳನ್ನು ನಿಲ್ಲಿಸಿ ರಾಜಕೀಯ ಪಕ್ಷಗಳ ಗೆಲುವಿಗೆ ಕಡಿವಾಣ ಹಾಕುವಂತೆ ಸಹ್ಯಾದ್ರಿ ಸಂಚಯ ತೀವ್ರವಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.