ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ ಕುಮಾರ್ ಹೆಗಡೆ ಕೆಲವು ದಿನಗಳ ಹಿಂದೆ ಮುಸ್ಲಿಂ ಧರ್ಮದ ವಿರುದ್ಧ ನೀಡಿರುವ ಹೇಳಿಕೆ ದೇಶದ ಎಲ್ಲ ಧರ್ಮಗಳ ಸಂದೇಶದ ವಿರುದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಗೌರವಿಸುವುದಾದಲ್ಲಿ ಹಾಗೂ ಜಾತ್ಯತೀತತೆ ಪಾಲಿಸುವುದೇ ಆದಲ್ಲಿ ಹೆಗಡೆ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಆಗ್ರಹಿಸಿದರು.
ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಇಸ್ಲಾಂ ಧರ್ಮ ನಾಶವಾಗುವ ವರೆಗೆ ಭಯೋತ್ಪಾದನೆ ನಿಲ್ಲುವುದಿಲ್ಲ ಎಂದು ನೀಡಿರುವ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ. ಯಾವುದೇ ಧರ್ಮವೂ ಇನ್ನೊಂದು ಧರ್ಮವನ್ನು ದ್ವೇಷಿಸಲು ತಿಳಿಸುವುದಿಲ್ಲ. ಸರ್ವೇ ಜನಃ ಸುಖೀನೋ ಭವಂತು ಎನ್ನುವ ಹಿಂದೂ ಧರ್ಮದ ಸಾರವನ್ನೂ ಅನಂತ ಕುಮಾರ್ ಹೆಗಡೆ ತಿಳಿದುಕೊಳ್ಳಬೇಕಿದೆ.
ಶಾಂತಿ ಸಂಕೇತವಾಗಿರುವ ಇಸ್ಲಾಂ ಧರ್ಮ ಉಗ್ರವಾದವನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ.ಬದಲಾಗಿ ತೀವ್ರವಾಗಿ ಖಂಡಿಸುತ್ತದೆ. ಪ್ರಧಾನಿಯವರು ಎಲ್ಲ ಧರ್ಮಗಳಿಗೂ ಗೌರವ ಕೊಡುತ್ತೇವೆ, ರಕ್ಷಣೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಅನಂತ ಕುಮಾರ್ ಅವರು ಬೇಜವಬ್ದಾರಿಯುತ ಹೇಳಿಕೆ ನೀಡಿದ್ದಾರೆ ಎಂದರು.
ಮೋದಿ ಸರಕಾರ ಮತೀಯವಾದಿ ಹಾಗೂ ಕೋಮುವಾದಿಗಳನ್ನು ಪಕ್ಷದಿಂದ ಉಚ್ಛಾಟಿಸಬೇಕು. ಸರಕಾರಕ್ಕೆ ಮುಜುಗರವಾಗುವ ಹೇಳಿಕೆ ನೀಡುವವರನ್ನು ದೂರವಿಡುವ ಕುರಿತು ಅನುಪಮ್ ಖೇರ್ ಉತ್ತಮ ಅಭಿಪ್ರಾಯ ನೀಡಿದ್ದಾರೆ. ಕಾಂಗ್ರೆಸ್ ಸಂವಿಧಾನ ನೀಡಿದ ಪಕ್ಷ. ಸಂವಿಧಾನದ ಪ್ರಕಾರ ಜನರಿಗೆ ವಿವಿಧ ಸ್ವಾತಂತ್ರÂಗಳೊಂದಿಗೆ ಧಾರ್ಮಿಕ, ವಾಕ್ ಸ್ವಾತಂತ್ರÂವನ್ನೂ ನೀಡಲಾಗಿದೆ. ಆದರೆ, ಅದನ್ನು ದುರುಪಯೋಗಪಡಿಸಿಕೊಳ್ಳಬಾರದು. ಮೋದಿ ಸರಕಾರ ಬಂದ ಮೇಲೆ ಅಸಹಿಷ್ಣುತೆ ಪ್ರಾರಂಭವಾಗಿದ್ದು, ಈ ರೀತಿಯ ಹೇಳಿಕೆ ನೀಡಿದ ಬಳಿಕ ಗಂಡಾಂತರ ಇನ್ನಷ್ಟು ಹೆಚ್ಚಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಎಂ. ಮಸೂದ್, ಕಾರ್ಪೋರೇಟರ್ ಎ.ಸಿ. ವಿನಯ್ರಾಜ್, ನಝೀರ್ ಬಜಾಲ್, ಸದಾಶಿವ ಉಳ್ಳಾಲ್ ಉಪಸ್ಥಿತರಿದ್ದರು.