ಮಂಗಳೂರು: ಕರಾವಳಿ ಜನರಿಗೆ ಮೋಸ ಮಾಡಲಿರುವ ಎತ್ತಿನಹೊಳೆ ಯೋಜನೆ ಜಾರಿಗೆ ನಿರ್ಧರಿಸಿರುವ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ ಭಾಗದ ಜನರ ಪ್ರಾಣದ ಜತೆಗೆಚೆಲ್ಲಾಟವಾಡುತ್ತಿವೆ. ಕರಾವಳಿ ಜನರನ್ನು ಬದುಕಲು ಬಿಡುವುದಿಲ್ಲ ಎಂಬ ನೋವಿನೊಂದಿಗೆ ಇದೀಗ ಕರಾವಳಿ ಜನರು ಪ್ರತ್ಯೇಕ ರಾಜ್ಯ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಸರಕಾರ ಇನ್ನಾದರೂ ಕರಾವಳಿ ಜನರ ಬಗ್ಗೆ ಗಂಭೀರವಾಗಿ ಯೋಚಿಸುವುದು ಅಗತ್ಯ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಕರ್ನಾಟಕವನ್ನು ಒಡೆಯಲು ಪ್ರಯತ್ನಿಸುತ್ತಿದೆಯೇ? ನಮ್ಮನ್ನು ಬದುಕಲು ಬಿಡುವುದಿಲ್ಲ, ನಮ್ಮ ನೋವನ್ನು ಕೇಳುವುದಿಲ್ಲ ಎಂದರೆ ಅರ್ಥ ಏನು? ಒಂದು ವೇಳೆ ಪ್ರತ್ಯೇಕ ರಾಜ್ಯ ರಚನೆಯಾದರೆ, ಕರ್ನಾಟಕ ಹೋಳು ಮಾಡಿದ ಪಾಪ ಕಾಂಗ್ರೆಸ್ ಹಾಗೂ ಬಿಜೆಪಿಗೆ ತಟ್ಟುವುದಿಲ್ಲವೇ? ಎಂದು ಪ್ರಶ್ನಿಸಿದ ಪೂಜಾರಿ, ಕರಾವಳಿ ಜನರನ್ನು ಯಾರೂ ರಕ್ಷಣೆ ಮಾಡುವುದಿಲ್ಲ. ಈ ಭಾಗದವರ ಮಾತಿಗೆ ಬೆಲೆ ಇಲ್ಲ ಎಂಬ ಕಾರಣದಿಂದ ಪ್ರತ್ಯೇಕ ರಾಜ್ಯದ ಬೇಡಿಕೆ ಬರುತ್ತಿದೆ. ಈ ಭಾಗದ ಶಾಸಕರು/ ಸಂಸದರು ಕೂಡ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ನಿಮಗೆಲ್ಲ ಅಧಿಕಾರವೇ ಮುಖ್ಯ ವಾಯಿತೇ ಎಂದರು ಪ್ರಶ್ನಿಸಿದರು.