ಮಂಗಳೂರು: ಮಂಗಳೂರಿನ ಜೈಲಿನಲ್ಲಿ "ಅವೈಜ್ಞಾನಿಕ'ವಾಗಿ ಅಳವಡಿಸಲಾದ ಮೊಬೈಲ್ ಜಾಮರ್ನಿಂದ ಮಂಗಳೂರಿನ ಎಂಜಿ ರಸ್ತೆ ಮತ್ತು ಪರಿಸರದಲ್ಲಿ ಉಂಟಾಗಿರುವ ನೆಟ್ವರ್ಕ್ ಜಾಮ್ ಬಾಧಿತ ಪ್ರದೇಶಗಳ ನಿವಾಸಿಗಳ ವೇದಿಕೆ ಇಂದು ಮಂಗಳೂರಿನ ದೀಪಾ ಹೊಟೇಲ್ನಲ್ಲಿ ತುರ್ತು ಸಭೆ ನಡೆಸಿತು.
ಜಾಮರ್ ಬಾಧಿತ ಪ್ರದೇಶದ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು, ವಾಣಿಜ್ಯ-ವಸತಿ ಕಟ್ಟಡದ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಕಳೆದ ಒಂದು ತಿಂಗಳಿನಿಂದ ಪರಿಸರದಲ್ಲಿ ಉಂಟಾಗಿರುವ ಜಾಮರ್ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.ಬಳಿಕ ವೇದಿಕೆ ಪ್ರತಿನಿಧಿಗಳ ನಿಯೋಗದವರು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರನ್ನು ಭೇಟಿಯಾಗಿ, ಜಾಮರ್ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದರು. ಮಂಗಳೂರಿನ ಬಂಟ್ಸ್ಹಾಸ್ಟೆಲ್ ಪ್ರದೇಶದಿಂದ ಕರಂಗಲ್ಪಾಡಿ, ಕೊಡಿಯಾಲ್ಬೈಲ್, ಬಲ್ಲಾಳ್ಭಾಗ್; ಕೊಡಿಯಾಲಗುತ್ತು ವೆಸ್ಟ್ ಪ್ರದೇಶದಿಂದ ಪಿಂಟೋಸ್ಲೇನ್ ಬಿಜೈವರೆಗೆ ಜಾಮರ್ನಿಂದ ಸಾರ್ವಜನಿಕ ಮೊಬೈಲ್ ಸೆಟ್ಗಳು ಕಾರ್ಯಬಾಧಿತವಾಗಿದೆ ಎಂದು ನಿಯೋಗದವರು ವಿವರಿಸಿದರು.