ಮಂಗಳೂರು: ನಗರದ ಸೆಂಟ್ರಲ್ ಮಾರ್ಕೆಟ್ನಲ್ಲಿ ಫೆ. 28ರ ತಡರಾತ್ರಿ ಜಯಾನಂದ ಯಾನೆ ಜಯ ಅಮ್ಮನ್ನ (50) ಅವರನ್ನು ಕೊಲೆ ಮಾಡಿದ್ದ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂದರು ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ಪುತ್ತೂರು ತಾಲೂಕು ಚಿಕ್ಕಮುಟ್ನೂರಿ ನವನಾಗಿದ್ದು, ಪ್ರಸ್ತುತ ಮಂಗಳೂರಿನ ಕಪಿತಾ ನಿಯೋ ಶಾಲೆಯ ಬಳಿಯ ಸೈಮನ್ ಲೇನ್ನಲ್ಲಿ ವಾಸಿಸುತ್ತಿದ್ದ ರವಿ ಯಾನೆ ರವೀಂದ್ರ ಸಾಲಿಯಾನ್ (35) ಮತ್ತು ದಾವಣಗೆರೆ ಜಿಲ್ಲೆ ಹರಿಹರ ನಿವಾಸಿ ನವೀನ (20) ಬಂಧಿತರು. ಆರೋಪಿಗಳನ್ನ್ನು ಪಂಪ್ವೆಲ್ ಮತ್ತು ಬಿಜೈ ಕೆ.ಎಸ್.ಆರ್.ಟಿ.ಸಿ. ಬಳಿ ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರು ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಯಾನಂದ ಯಾನೆ ಜಯ ಅಮ್ಮನ್ನ ಅವರ ಮೃತ ದೇಹ ಫೆ. 29 ರಂದು ಬೆಳಗ್ಗೆ ಸೆಂಟ್ರಲ್ ಮಾರ್ಕೆಟ್ನ ದ್ವಾರದ ಬಳಿ ತರಕಾರಿ ಅಂಗಡಿಯೊಂದರ ಬಳಿ ಪತ್ತೆಯಾಗಿತ್ತು. ಅವರ ಎಡ ಕಿವಿಯ ಹಿಂಭಾಗದಲ್ಲಿ ತೀವ್ರ ಸ್ವರೂಪದ ಗಾಯ ಕಂಡು ಬಂದಿದ್ದು, ಇದೊಂದು ಕೊಲೆ ಪ್ರಕರಣವೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಪ್ರಾರಂಭದಲ್ಲಿ ಮೃತರ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಬಂದರು ಪೊಲೀಸರು ಅಪರಿಚಿತ ವ್ಯಕ್ತಿಯನ್ನು ಅಪರಿಚಿತರು ಕೊಲೆ ಮಾಡಿರುವುದಾಗಿ ಕೇಸು ದಾಖಲಿಸಿದ್ದರು.